ಬೆಂಗಳೂರು: ‘ಚೀನಾವು ನರಿ ಬುದ್ಧಿ ತೋರಿಸಿದೆ. ಇದನ್ನು ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳೂ ಖಂಡಿಸಿವೆ. ರಾಷ್ಟ್ರದ ಹಿತದ ಬಗ್ಗೆ ನಮಗೆಲ್ಲರಿಗೂ ಕಾಳಜಿ ಇದೆ. ಆದರೆ ನಮ್ಮ ಯೋಧರು ಹುತಾತ್ಮರಾಗಲು ಕಾರಣ ಏನು ಎಂಬುದನ್ನು ಪ್ರಧಾನಿ ಇನ್ನೂ ದೇಶದ ಜನತೆ ಮುಂದೆ ಇಟ್ಟಿಲ್ಲ’ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ಜಂಟಿ ಪತ್ರಿಕೋಷ್ಠಿ ನಡೆಸಿದ ಅವರು, ‘ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಅವರು ಗಡಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದಿದ್ದಾರೆ. ಮೋದಿ ಹೇಳಿದ್ದೇ ಒಂದು, ಗಡಿಯಲ್ಲಿ ನಡೆದದ್ದೇ ಒಂದು. ಪ್ರಧಾನಿಯವರು ಸತ್ಯ ಬಹಿರಂಗಪಡಿಸಬೇಕು. ಏನೂ ಆಗಿಲ್ಲವೆಂದರೆ 20 ಸೈನಿಕರು ಸತ್ತಿದ್ದು ಹೇಗೆ। ಅವರನ್ನು ಕೊಂದವರು ಯಾರು?’ ಎಂದು ಪ್ರಶ್ನಿಸಿದರು.
ಲಾಕ್ಡೌನ್ ಘೋಷಣೆ ಅಧಿಕಾರ ಇದೆ: ‘ಡಿಕೆಶಿ ಲಾಕ್ಡೌನ್ ಘೋಷಣೆ ಮಾಡಲು ಬರುವುದಿಲ್ಲ’ ಎಂಬ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಹೇಳಿಕೆ ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್, ‘ನಾನು ಕನಕಪುರದ ನಾಗರಿಕ, ಜನ ನನಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಅವರು ಸರ್ಕಾರದ ಭಾಗವಾಗಿದ್ದಾರೆ. ಅವರು ದೊಡ್ಡವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಯಾವುದೇ ಎಪಿಸೋಡ್ ಬೇಕಾದರೂ ಬಿಡುಗಡೆ ಮಾಡಲಿ’ ಎಂದರು
‘ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ವಿಚಾರದಲ್ಲೂ ಅಷ್ಟೇ, ಬಿಜೆಪಿ ಸರ್ಕಾರ ಏನು ಬೇಕಾದರೂ ಮಾಡಲಿ, ಸಲಹೆ ಕೇಳಿದರೆ ಕೊಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.