ADVERTISEMENT

ನಿಮ್ಮ ಕ್ಷೇತ್ರದ ಶೇ 75ರಷ್ಟಾದರೂ ಅನುದಾನ ನಮಗೆ ಕೊಡಿ: ಡಿಕೆಶಿಗೆ ಖರ್ಗೆ ಟಾಂಗ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 23:59 IST
Last Updated 12 ಜನವರಿ 2026, 23:59 IST
   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಹರಿದು ಬರುತ್ತಿರುವ ಅನುದಾನದ ಕುರಿತು ಉಲ್ಲೇಖಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಾಂಗ್ ನೀಡಿದ ಪ್ರಸಂಗ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ನಡೆಯಿತು.

371 (ಜೆ) ಕಲಂ ಸಂವಿಧಾನ ತಿದ್ದುಪಡಿ ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ಅನುದಾನ ಹರಿದು ಬರುತ್ತಿದೆ. ಇದನ್ನು ನೋಡಿದರೆ ನಾನು ಇಲ್ಲಿಯೇ ಹುಟ್ಟಬೇಕಿತ್ತು. ನನ್ನ ಕ್ಷೇತ್ರ ಇಲ್ಲಿಯೇ ಇರಬೇಕಿತ್ತು ಎಂದು ಅನಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಶಿವಕುಮಾರ್ ಅವರೇ, ನೀವು ನಮ್ಮಲ್ಲಿ ಹುಟ್ಟುವುದೂ ಬೇಡ. ನಾವು ನಿಮ್ಮ ಭಾಗದಲ್ಲಿ ಹುಟ್ಟುವುದೂ ಬೇಡ. ಮೈಸೂರು ಮತ್ತು ಕನಕಪುರ ಕ್ಷೇತ್ರಗಳು ಎಷ್ಟು ಅಭಿವೃದ್ಧಿ ಆಗಿವೆಯೋ ಅದರ ಶೇ 75ರಷ್ಟಾದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಲು ಬೇಕಾದ ನೆರವು ನೀಡಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.

ADVERTISEMENT

ಬಫೆ ಊಟದ ಪದ್ಧತಿಯಲ್ಲಿ ಬೇಗ ಹೋದವರಿಗೆ ಎಲ್ಲ ಖಾದ್ಯಗಳು ಸಿಗುತ್ತವೆ. ದಕ್ಷಿಣ ಕರ್ನಾಟಕದವರು ಬಫೆ ಸಿಸ್ಟಂನಲ್ಲಿ ಮುಂಚೆಯೆ ಹೋಗಿ ಏನು ಬೇಕೋ ಅದನ್ನು ಹಾಕಿಸಿಕೊಂಡಿದ್ದೀರಿ. ನಾವು ಕಲ್ಯಾಣ ಕರ್ನಾಟಕದವರು ಇನ್ನೂ ಊಟ ಬರಬಹುದು ಎಂದು ಪಂಕ್ತಿಯಲ್ಲೇ ಕುಳಿತು ಕಾಯುತ್ತಿದ್ದೇವೆ ಎಂದು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು, ಬೆಂಗಳೂರು ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗಾವಕಾಶಗಳು ಸಿಗುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳಿದ್ದರೂ ಶಿಕ್ಷಕರಿಲ್ಲ. ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡು ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ನಿಯೋಜನೆ ಮಾಡಿರಿ. ನಮ್ಮಲ್ಲಿ ಭರ್ತಿಯಾಗಿ ಮಿಕ್ಕಿದರೆ ದಕ್ಷಿಣ ಕರ್ನಾಟಕಕ್ಕೆ ಕೊಂಡೊಯ್ಯಿರಿ ಎಂದರು.

ಖರ್ಗೆ ಅವರ ಮಾತುಗಳನ್ನು ಡಿ.ಕೆ.ಶಿವಕುಮಾರ್ ನಸುನಗುತ್ತಲೇ ಆಲಿಸಿದರು.

ಶಿಕ್ಷಕರ ಬೇಡಿಕೆಯ ಬಗ್ಗೆ ಖರ್ಗೆ ಅವರು ಭಾಷಣದಲ್ಲಿ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರೊಂದಿಗೆ ಮಾತಿನಲ್ಲಿ ನಿರತರಾಗಿದ್ದರಿಂದ ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಹೀಗಾಗಿ ಶಿಕ್ಷಕರ ಹುದ್ದೆ ಭರ್ತಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ.

‘ಮಂಡಳಿಗೆ ₹13 ಸಾವಿರ ಕೋಟಿ’

‘ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ 2023–24ರಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹3 ಸಾವಿರ ಕೋಟಿ, 2024–25ರಲ್ಲಿ ₹5 ಸಾವಿರ ಕೋಟಿ, ₹2025–26ರಲ್ಲಿ ₹5 ಸಾವಿರ ಕೋಟಿ ಸೇರಿದಂತೆ ಇದುವರೆಗೆ ₹13 ಸಾವಿರ ಕೋಟಿ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಈ ವರ್ಷ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ₹4 ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದಾರೆ. ಎಲ್ಲ ₹5 ಸಾವಿರ ಕೋಟಿಯನ್ನೂ ಖರ್ಚು ಮಾಡಿ ಅಭಿವೃದ್ಧಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದೇನೆ. ಅಷ್ಟೂ ಹಣ ಖರ್ಚಾದರೆ ಮತ್ತೆ ಕೊಡುತ್ತೇನೆ’ ಎಂದರು.

ಇದಕ್ಕೂ ಮುನ್ನ ಮಾತನಾಡಿದ್ದ ಅಜಯ್ ಸಿಂಗ್, ‘ಈ ಬಜೆಟ್‌ನಲ್ಲಿ ಮಂಡಳಿಗೆ ₹6 ಸಾವಿರ ಕೋಟಿ ಅನುದಾನ ಮೀಸಲಿಡಬೇಕು’ ಎಂದು ಮನವಿ ಮಾಡಿದ್ದರು.

‘ಬುಡಬುಡಿಕೆಗೆ ದೇವರು ಒಲಿಯಲ್ಲ’

‘ನರೇಂದ್ರ ಮೋದಿ ಅವರು ಎಲ್ಲಾ ಹಳೆ ಗುಡಿಗುಂಡಾರಳಿಗೆ ಅಲೆದಾಡಿ, ಗಂಟೆ ಬಾರಿಸುತ್ತಿದ್ದಾರೆ. ದೇವರು ನಿಮ್ಮ ಕೆಲಸದಿಂದ ಪ್ರಸನ್ನನಾಗುತ್ತಾನೆಯೇ ಹೊರತು ನೀವು ಬಾರಿಸುವ ಬುಡಬುಡಿಕೆಯಿಂದಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

‘ಇವರು ಬರೀ ದೇವರು, ಧರ್ಮದ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಧರ್ಮ, ದೇವರು ಇರುವುದು ಜನರ ಕಲ್ಯಾಣಕ್ಕಾಗಿ. ಇವರು ವೋಟ್‌ ಸಲುವಾಗಿ ರಾಮಮಂದಿರ ಕಟ್ಟಿದ್ದೇನೆ ಎನ್ನುತ್ತಾರೆ. ಸೋಮನಾಥ ಮಂದಿರಕ್ಕೆ ಸಾವಿರ ವರ್ಷವಾಯಿತು ಎಂದು ಹೋಗುತ್ತಿದ್ದಾರೆ. 900 ವರ್ಷಗಳಾದಾಗ ಏಕೆ ನೆನಪಿಗೆ ಬಂದಿಲ್ಲ? ಮುಂಬರುವ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಚುನಾವಣೆ ಕಾರಣಕ್ಕೆ ಈಗ ಸೋಮನಾಥ ಮಂದಿರ ನೆನಪಿಗೆ ಬರುತ್ತಿದೆ. ಜನರ ಮನಸ್ಸನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.