ADVERTISEMENT

ಅಪಘಾತದ ಭಯ; ಸಿದ್ದರಾಮಯ್ಯ ಬೆಂಗಾವಲು ಪಡೆ ಸಿಬ್ಬಂದಿ ಎಆರ್‌ಎಸ್‌ಐ ಮರೀಗೌಡ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:22 IST
Last Updated 9 ಜನವರಿ 2019, 19:22 IST
ಶ್ರೀರಂಗಪಟ್ಟಣ ತಾಲ್ಲೂಕು ಗೌಡಹಳ್ಳಿ ಗೇಟ್ ಬಳಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಕ್ಕೆ ಮತ್ತೊಂದು ಕಾರು ಡಿಕ್ಕಿಯಾಗಿ ಜಖಂಗೊಂಡಿರುವುದು
ಶ್ರೀರಂಗಪಟ್ಟಣ ತಾಲ್ಲೂಕು ಗೌಡಹಳ್ಳಿ ಗೇಟ್ ಬಳಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಕ್ಕೆ ಮತ್ತೊಂದು ಕಾರು ಡಿಕ್ಕಿಯಾಗಿ ಜಖಂಗೊಂಡಿರುವುದು   

ಮಂಡ್ಯ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಗಾವಲು ಪಡೆ ಸಿಬ್ಬಂದಿ ಎಆರ್‌ಎಸ್‌ಐ ಮರೀಗೌಡ (56) ಹೃದಯಾಘಾತಕ್ಕೀಡಾಗಿ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬೆಳಿಗ್ಗೆ ಸಂಭವಿಸಿದ ಬೆಂಗಾವಲು ವಾಹನದ ಅಪಘಾತವನ್ನು ಕಂಡು ವಾಹನದಲ್ಲಿದ್ದ ಮರೀಗೌಡ ಆಘಾತಕ್ಕೆ ಒಳಗಾಗಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಅಪಘಾತದಲ್ಲಿ ಕಾರುಗಳು ಮಾತ್ರ ಜಖಂಗೊಂಡಿದ್ದು, ಯಾವುದೇ ಸಾವು, ನೋವು ಸಂಭವಿಸಿರಲಿಲ್ಲ. ಆದರೆ, ಭಯಗೊಂಡಿದ್ದ ಮರೀಗೌಡ ನಗರದ ಪೊಲೀಸ್ ವಸತಿಗೃಹದ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

5 ವಾಹನ ಜಖಂ

ADVERTISEMENT

ಶ್ರೀರಂಗಪಟ್ಟಣ: ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಬುಧವಾರ ಬೆಳಿಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನಗಳ ಪೈಕಿ ‘ಟೇಲ್’ ಕಾರಿಗೆ ಅದರ ಹಿಂದೆ ಬರುತ್ತಿದ್ದ ವಾಹನ ಡಿಕ್ಕಿ ಹೊಡೆದು 5 ಕಾರುಗಳು ಜಖಂಗೊಂಡಿವೆ.

ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕಿಂತ ಸಾಕಷ್ಟು ಹಿಂದೆ ಬರುತ್ತಿದ್ದ ಟೇಲ್ ಕಾರಿಗೆ ತುರ್ತು ಸಂದರ್ಭದಲ್ಲಿ ಬಳಸುವ ಕಾರು ಡಿಕ್ಕಿ ಹೊಡೆದಿದೆ.

‘ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌, ಟೇಲ್ ಕಾರನ್ನು ಹಿಂದಿಕ್ಕಲು ಯತ್ನಿಸಿದೆ. ಆ ಸಂದರ್ಭದಲ್ಲಿ ಟೇಲ್ ಕಾರಿನ ಚಾಲಕ ಬ್ರೇಕ್ ಹಾಕಿದ್ದಾರೆ. ಅದರ ಹಿಂದೆ ಬರುತ್ತಿದ್ದ ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಖಂಗೊಂಡಿರುವ ಟೇಲ್ ಕಾರು, ವಿಪಿ ಕಾರು ಮತ್ತು ಇತರ ಮೂರು ಸ್ವಿಫ್ಟ್ ಕಾರುಗಳಲ್ಲಿ ಇದ್ದವರಿಗೂ ಯಾವುದೇ ಅಪಾಯವಾಗಿಲ್ಲ. ಅಪಘಾತದಿಂದ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಕೆಲಕಾಲ ತೊಡಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.