ADVERTISEMENT

ಮಂಡ್ಯ: ಭತ್ತದ ಪೈರಿನಲ್ಲಿ ಅಂಬರೀಷ್‌ ಅಭಿಮಾನ!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 5:47 IST
Last Updated 9 ಫೆಬ್ರುವರಿ 2019, 5:47 IST
ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್‌ ಅಭಿಮಾನ
ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್‌ ಅಭಿಮಾನ   

ಮಂಡ್ಯ: ರೆಬಲ್‌ಸ್ಟಾರ್‌ ಅಂಬರೀಷ್‌ ಹೆಸರಿನಲ್ಲಿ ಮಣ್ಣಿಗೆ ಬಿತ್ತಿದ ಭತ್ತದ ಬೀಜ ಮೊಳಕೆಯೊಡೆದಿದೆ. ಸೋಂಪಾಗಿ ಬೆಳೆದಿರುವ ಪೈರು ‘ಮತ್ತೆ ಹುಟ್ಟಿ ಬಾ ಅಂಬರೀಷ್‌ ಅಣ್ಣ’ ಎಂದು ಸಾರಿ ಹೇಳುತ್ತಿದೆ.

ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದ ಎಂ.ಪಿ.ಹರ್ಷಿತ್‌, ರಾಜು ಕಾಳಪ್ಪ, ಎಂ.ಜೆ.ದಿಲೀಪ್‌ ಕುಮಾರ್‌ ಸಹೋದರರು ತಮ್ಮ ಗದ್ದೆಯಲ್ಲಿ ಭತ್ತದ ಬಿತ್ತನೆ ಬೀಜ ಬಿತ್ತುವ ಮೂಲಕವೇ ಅಂಬರೀಷ್‌ ಮೇಲಿನ ಅಭಿಮಾನ ಮೆರೆದಿದ್ದಾರೆ. ಇವರು ಅಂಬರೀಷ್‌ ಪುಣ್ಯತಿಥಿಯ ದಿನ ಕೇಶಮುಂಡನ ಮಾಡಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದರು.

ಬೇಸಿಗೆ ಬೆಳೆಗೆ ಕಳೆದ 15 ದಿನಗಳ ಹಿಂದೆ ಒಂದು ಗುಂಟೆ ಗದ್ದೆಯಲ್ಲಿ ಭತ್ತದ ಹೊಟ್ಟಲು ಹಾಕಿದ್ದಾರೆ. ಗದ್ದೆಯ ನಡುವೆ ಹೃದಯಾಕಾರದಲ್ಲಿ ‘ಮತ್ತೆ ಹುಟ್ಟಿ ಬಾ ಅಂಬರೀಷ್‌ ಅಣ್ಣ’ ಎಂದು ಬರೆದು ಬಿತ್ತನೆ ಬೀಜ ಬಿತ್ತಿದ್ದಾರೆ. ಈಗ ಪೈರು ಮೇಲಕ್ಕೆ ಬೆಳೆದು ಬಂದಿದ್ದು ಅಂಬರೀಷ್‌ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ADVERTISEMENT

ಚಿತ್ರಗಳು ವೈರಲ್‌: ಭತ್ತದ ಪೈರಿನಲ್ಲಿ ಮೂಡಿರುವ ಅಂಬರೀಷ್‌ ಅಭಿಮಾನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂಬರೀಷ್‌ ಪತ್ನಿ ಸುಮಲತಾ ಟ್ವಿಟರ್‌ನಲ್ಲಿ ಈ ಚಿತ್ರಗಳನ್ನು ಪ್ರಕಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇದೇ ಶಾಶ್ವತ ಪ್ರೇಮ. ಅಭಿಮಾನ ತೋರಿಸಲು ಎಂತಹ ಸುಂದರ ಅಭಿವ್ಯಕ್ತಿ, ಮನಸ್ಸು ತುಂಬಿ ಬಂದಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.