ಬೆಂಗಳೂರು: ‘ಮಂಡ್ಯ ಬೆಲ್ಲ ತಿರಸ್ಕರಿಸಿದ ಕೇರಳ‘ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ'ಯಲ್ಲಿ ಇದೇ 16ರಂದು ಪ್ರಕಟವಾದ ವಿಶೇಷ ವರದಿ ವಿಧಾನ ಪರಿಷತ್ನಲ್ಲಿ ಗುರುವಾರ ಪ್ರತಿಧ್ವನಿಸಿತು.
‘ಮಂಡ್ಯ ಬೆಲ್ಲ’ ಮಾನವ ಬಳಕೆಗೆ ಯೋಗ್ಯವಲ್ಲ ಎಂಬ ಕಾರಣ ನೀಡಿ ಕೇರಳ ಸರ್ಕಾರ ತಿರಸ್ಕರಿಸಿರುವ ಬಗ್ಗೆ ಪ್ರಕಟವಾದ ವರದಿಯನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ, 'ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
‘ಗುಜರಾತ್ ಈಗಾಗಲೇ ಮಂಡ್ಯ ಬೆಲ್ಲ ಖರೀದಿ ನಿಷೇಧಿಸಿದ್ದು, ಕೇರಳ ಎರಡನೇ ರಾಜ್ಯವಾಗಿದೆ. ‘ಸಕ್ಕರೆ ನಾಡು’ ಎಂದು ಕರೆಸಿಕೊಳ್ಳುವ ಮಂಡ್ಯ ಜಿಲ್ಲೆ ಈಗ ಕಳಪೆ ಹಾಗೂ ರಾಸಾಯನಿಕಯುಕ್ತ ಬೆಲ್ಲ ಉತ್ಪಾದನೆಯಲ್ಲಿ ಕುಖ್ಯಾತಿ ಪಡೆಯುತ್ತಿದೆ. ಎಪಿಎಂಸಿ ವರ್ತಕರು ‘ಮಂಡ್ಯ ಬೆಲ್ಲ’ ಎಂಬ ಬ್ರ್ಯಾಂಡ್ ಹೆಸರಿನಲ್ಲೇ ಮಾರಾಟ ಮಾಡುತ್ತಿದ್ದರು. ಈ ಹೆಸರಿನಲ್ಲಿ ವರ್ತಕರು ಹಾಗೂ ಕೆಲವು ಆಲೆಮನೆ ಮಾಲೀಕರು ದೊಡ್ಡ ಮಟ್ಟದ ದಂಧೆ ನಡೆಸಿರುವುದು ಈಗ ಬಯಲಾಗಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಕಳಪೆ ಬೆಲ್ಲ ತರಿಸಿ, ಆಲೆಮನೆಗಳಲ್ಲಿ ಅದಕ್ಕೆ ಸಕ್ಕರೆ, ರಾಸಾಯನಿಕ ಸೇರಿಸಿ ಪುನರ್ ಉತ್ಪಾದನೆ ಮಾಡಿ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರ ತುರ್ತು ಗಮನಹರಿಸಬೇಕು’ ಎಂದರು.
ಆಗ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಆಹಾರ ಸಚಿವರಿಂದ ಈ ಬಗ್ಗೆ ಉತ್ತರ ಕೊಡಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.