ADVERTISEMENT

ಮಂಗಳೂರು ಬಾಂಬ್‌: ಆರೋಪಿ ಆದಿತ್ಯ ರಾವ್‌ನನ್ನು ಸ್ಥಳಕ್ಕೆ ಕರೆದೊಯ್ದು ತನಿಖೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 10:31 IST
Last Updated 24 ಜನವರಿ 2020, 10:31 IST
ಆರೋಪಿ ಆದಿತ್ಯ ರಾವ್‌
ಆರೋಪಿ ಆದಿತ್ಯ ರಾವ್‌   

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯ ರಾವ್‌ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 10 ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ಶುಕ್ರವಾರ ಬಾಂಬ್ ಇರಿಸಿದ್ದ ಸ್ಥಳವಾದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಯಾವುದೇ ಆತಂಕ, ಭಯವಿಲ್ಲದೇ ಆರೋಪಿ ಆದಿತ್ಯ ರಾವ್, ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡದ ಎದುರು ಏರ್ ಪೋರ್ಟ್‌ನಲ್ಲಿ ಬಾಂಬ್ ಇಟ್ಟು ಪರಾರಿಯಾದ ಬಗ್ಗೆ ಮಾಹಿತಿ ನೀಡಿದ್ದಾನೆ.

ADVERTISEMENT

ತಾನು ಮೊದಲು ಬಂದು ಇಳಿದಿದ್ದ ಸ್ಥಳ ಬಗ್ಗೆ ವಿವರಿಸಿ ಬಳಿಕ ಎಂಟ್ರಿ ಗೇಟ್ ಮೂಲಕ ಒಳಪ್ರವೇಶಿಸಿ, ಇಲ್ಲೇ ಸ್ಫೋಟಕ ಇದ್ದ ಬ್ಯಾಗ್ ಇರಿಸಿದ್ದಾಗಿ ಕಬ್ಬಿಣದ ಚೇರ್‌ವೊಂದನ್ನು ತೋರಿಸಿದ್ದಾನೆ. ಆ ಬಳಿಕ ಅಲ್ಲಿಂದ ಅವಸರವಸರವಾಗಿ ಹೊರಟು ಎಕ್ಸಿಟ್ ಗೇಟ್ ಬಳಿ ಸಿಕ್ಕ ರಿಕ್ಷಾ ಹತ್ತಿ ಅಲ್ಲಿಂದ ಹೊರ ಬಂದಿರುವುದಾಗಿ ತಿಳಿಸಿದ್ದಾನೆ.

ಸ್ಪೋಟಕವಿರಿಸಿದ ಬಗ್ಗೆ ಆದಿತ್ಯರಾವ್‌ನಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ ತಂಡ ಆ ಬಳಿಕ ಅಲ್ಲಿಂದ, ಅದಿತ್ಯರಾವ್ ಮತ್ತೊಂದು ಬ್ಯಾಗ್ ಇರಿಸಿದ್ದ ಕೆಂಜಾರಿನ ಸಲೂನ್ ಬಳಿ ಆತನನ್ನು ಕರೆದೊಯ್ದಿದ್ದಾರೆ.

ಇದಲ್ಲದೆ ಸ್ಫೋಟಕ ಇರಿಸುವ ಮುನ್ನ ಮಂಗಳೂರಿನ ಕುಡ್ಲ ಹೋಟೆಲ್ ಹಾಗೂ ಕಾರ್ಕಳದ ರೆಸ್ಟೋರೆಂಟ್ ಬಳಿಯೂ ಸ್ಥಳ ಮಹಜರು ನಡೆಸಿ ಸಾಕಷ್ಟು ಮಾಹಿತಿ ಕಲೆಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.