ಉಳ್ಳಾಲ (ದಕ್ಷಿಣ ಕನ್ನಡ): ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಧಾರಕಾರ ಮಳೆಗೆ ಗುಡ್ಡವೊಂದು ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಮಗು ಶುಕ್ರವಾರ ಮಧ್ಯಾಹ್ನ ಸಾವಿಗೀಡಾಗಿದೆ.
ಮನೆಯಲ್ಲಿ ಇದ್ದ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮಣ್ಣಿನಡಿ ಸಿಲುಕಿದ್ದರು. ಈ ಪೈಕಿ ಪ್ರೇಮ(58) ಎಂಬವರು ಬೆಳಿಗ್ಗೆ ಮೃತರಾಗಿದ್ದರು. ಅವರ ಪತಿ ಕಾಂತಪ್ಪ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಪಾರಾಗಿದ್ದರು. ಸೀತಾರಾಮ ಅವರ ಪತ್ನಿ ಅಶ್ವಿನಿ ಮತ್ತು 3 ವರ್ಷದ ಮಗುವನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮಧ್ಯಾಹ್ನ ಮುಕ್ತಾಯಗೊಂಡಿದೆ. ಮಳೆಯಿಂದಾಗಿ ಉಳ್ಳಾಲ ತಾಲ್ಲೂಕಿನಲ್ಲೇ ಮೃತಪಟ್ಟವರ ಸಂಖ್ಯೆ ಮೂರಾಗಿದೆ.
ಕಾಂತಪ್ಪ ಅವರ ಮನೆಯಲ್ಲಿ ಮುಂಜಾನೆ 4 ಗಂಟೆಯ ವೇಳ ಘಟನೆ ನಡೆದಿದ್ದು ಸ್ಥಳೀಯರು ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಮನೆ ಸಂಪೂರ್ಣ ಕುಸಿದಿದ್ದ ಕಾರಣ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬಂದ ನಂತರ ರಕ್ಷಣಾ ಕಾರ್ಯ ಮುಂದುವರಿಯಿತು.
ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು ಕೆಲವು ತಾಲ್ಲೂಕುಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ.
ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿ ಪಲ್ಟಿ
ಬಂಟ್ವಾಳ: ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಹೆಬ್ರಿಯಿಂದ ಬಂಟ್ವಾಳ ಕ್ಕೆ ಅಕ್ಕಿ ಮೂಟೆ ಸಾಗಿಸುತ್ತಿದ್ದ ಲಾರಿಯೊಂದು ಶುಕ್ರವಾರ ಬೆಳಿಗ್ಗೆ ಎಸ್ ವಿ ಎಸ್ ಕಾಲೇಜು ಬಳಿ ಇಳಿಜಾರು ರಸ್ತೆಯಲ್ಲಿ ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಜಾರ್ಖಂಡ್ ನ ಕಾರ್ಮಿಕ ನಿರ್ಮಲ್ ಅನುಸ್ತ್ (32) ಸ್ಥಳದಲ್ಲೇ ಸಾವಿಗೀಡಾಗಿದ್ದು, ಚಾಲಕ ಮತ್ತು ಕ್ಲೀನರ್ ಹಾಗೂ ಇನ್ನೊಬ್ಬ ಕಾರ್ಮಿಕ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.