ಬೆಳಗಾವಿ: ‘ಮನಮೋಹನ ಸಿಂಗ್ ಅವರ ಅಗಲಿಕೆ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿಗೆ ದೊಡ್ಡ ಹಾನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕಾಗಿ ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಹಾಕಿದ್ದ ‘ಗಾಂಧಿ ಭಾರತ’ ವೇದಿಕೆಯಲ್ಲೇ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಅವರೊಂದು ಮಾತು ಹೇಳುತ್ತಿದ್ದರು; ನಾನು ಬದುಕಿರುವಾಗ ನನ್ನ ಬಗ್ಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ನಾನು ಸತ್ತ ಮೇಲೆ ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುತ್ತಾರೆ ಎಂದು. ಆ ಮಾತು ಇಂದು ನಿಜವಾಗಿದೆ’ ಎಂದು ನೆನೆದರು.
‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಾವು ಆರಂಭಿಸಿದಾಗ ನಾವು ಮನಮೋಹನ್ ಸಿಂಗ್ ಅವರನ್ನು ಕರೆಸಿದ್ದೆವು. ಕರ್ನಾಟಕದ ಆರ್ಥಿಕತೆ ಬಗ್ಗೆ ಒಂದು ಕಾರ್ಯಕ್ರಮಕ್ಕೆ ನಾವು ಕರೆಸಿದ್ದೆವು. ಆಗ, ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಅತ್ಯಂದ ಸದೃಡವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು’ ಎಂದರು.
‘ಬಡತನದಿಂದ ಬಂದ ಮನಮೋಹನ ಸಿಂಗ್ ಅವರಿಗೆ ದೇಶದ ದೊಡ್ಡ ಹುದ್ದೆಗಳು ಸಿಕ್ಕವು. ಆದರೆ, ಅವರು ತಮ್ಮ ಬಡತನ ನಿವಾರಣೆ ಮಾಡಿಕೊಳ್ಳುವ ಯೋಚನೆ ಮಾಡಿದೇ, ಇಡೀ ದೇಶದ ದಾರಿದ್ರ್ಯ ನಿವಾರಣೆ ಮಾಡಿದರು. ಅವರನ ಆರ್ಥಿಕ ನೀತಿಗಳು, ವ್ಯಕ್ತಿತ್ವ, ಸರಳತೆ ಬಗ್ಗೆ ಮಾತನಾಡುವಾಗ ನನಗೆ ಅಚ್ಚರಿಯಾಗುತ್ತದೆ’ ಎಂದರು.
‘ಮನಮೋಹನ್ ಸಿಂಗ್ ಅವರಿಗಿಂತ ಮೊದಲು ದೇಶದ ಆರ್ಥಿಕತೆಯನ್ನು ವಿಶ್ವ ಆರ್ಥಿಕತೆ ಜೊತೆಗೆ ಮುಕ್ತ ಮಾಡಿರಲಿಲ್ಲ. ಇವರು ಮುಕ್ತಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದರು’ ಎಂದು ಅಭಿಪ್ರಾಯಪಟ್ಟರು.
‘ಬಹಳ ಮೃದು ಸ್ವಭಾವದ, ಮಿತ ಭಾಷಿಯಾಗಿ ಮಧ್ಯಮ ಮತ್ತು ಬಡ ಜನರ ದೃಷ್ಟಿಯಿಂದ ಈ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು. ನಾನು ಹಲವು ಬಾರಿ ಇವರನ್ನು ಭೇಟಿಯಾಗಿದ್ದೆ. ಸಂಯಮದಿಂದ ನಮ್ಮ ಮಾತನ್ನು ಕೇಳಿಸಿಕೊಂಡು ಬಳಿಕ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಿದ್ದರು. ಯಾವುದಾದರೂ ಕೆಲಸ ಆಗುವುದಿಲ್ಲ ಎಂದಿದ್ದರೆ ನೇರವಾಗಿ ಆಗುವುದಿಲ್ಲ ಎಂದು ಹೇಳುವಂಥ ಛಾತಿ ಅವರಿಗೆ ಇತ್ತು’ ಎಂದರು.
‘ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದರು. RBI ಗವರ್ನರ್ ಆಗಿ, ಆರ್ಥಿಕ ಸಚಿವರಾಗಿ, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಎಲ್ಲಾ ಹುದ್ದೆಗಳಿಗೂ ಪ್ರಾಮಾಣಿಕ ನ್ಯಾಯ ಒದಗಿಸಿದರು.
ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಆ ಹುದ್ದೆಗೆ ಮನಮೋಹನ್ ಸಿಂಗ್ ಅವರನ್ನು ಆರಿಸಿದರು. ಹತ್ತು ವರ್ಷಗಳ ಕಾಲ ದೇಶವನ್ನು ಅತ್ಯಂತ ಸದೃಡವಾಗಿ ಮುನ್ನಡೆಸಿದರು. ಭಾರತ ಆರ್ಥಿಕ ಸಂಕಷ್ಟದಲ್ಲಿದ್ದಾಗ ಉದಾರೀಕರಣ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು’ ಎಂದರು.
‘ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವುದರಲ್ಲಿ ಯಶಸ್ವಿಯಾದರು’ ಎಂದು ನೆನೆದರು.
‘ಗಾಂಧಿ ಭಾರತ ವೇದಿಕೆಯಲ್ಲೇ ಮತ್ತೊಬ್ಬ ಗಾಂಧಿ ಅವರಿಗೆ ಶ್ರದ್ಧಾಂಜಲಿ ನೀಡಿದ್ದು ದುಃಖದ ಸಂಗತಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
‘ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಅವರು ಜೂಮ್ ಮೀಟ್ ಮೂಲಕ ಭಾಗವಹಿಸುವಂತೆ ಯೋಚಿಸಿದ್ದೆವು. ಆದರೆ, ವಿಧಿ ಆಟ ಬೇರೆ ಆಗಿತ್ತು. ಒತ್ತುವರಿ ಮಾಡಿಕೊಳ್ಳುವ ಭೂಮಿಗೆ ನಗರದಲ್ಲಿ ಎರಡು ಪಟ್ಟು ಹಳ್ಳಿಗಳಲ್ಲಿ ನಾಲ್ಕು ಪಟ್ಟು ಪರಿಹಾರ ಕೊಡಬೇಕು ಎಂಬ ಅವರ ನಿಯಮ ಅಚ್ಚರಿ ಮೂಡಿಸಿತ್ತು’ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ‘ಮನಮೋಹನ ಜಗತ್ತಿನ ಆರ್ಥಿಕ ಸೂರ್ಯ’ ಎಂದು ಬಣ್ಣಿಸಿದರು.
‘ಅವರ ಅವಧಿಯಲ್ಲಿ ಭಾರತದ ಜಿಡಿಪಿ 7.7ಎಷ್ಟು ಏರಿಕೆ ಕಂಡಿತ್ತು. ಶೇ 11ರಷ್ಟು ಏರಿಕೆ ಕಂಡಿತ್ತು. ಅದನ್ನು ಕಂಡು ಇಡೀ ಜಗತ್ತು ಬೆರಗಾಗಿತ್ತು. ಅವರ ಆರ್ಥಿಕ ನೀತಿಯನ್ನೇ ಮುಂದುವರಿಸಿದ್ದರೆ ದೇಶ ಇಂದು ನಂಬರ್ ಒನ್ ಆರ್ಥಿಕ ಶಕ್ಯಿ ಆಗುತ್ತಿತ್ತು’ ಎಂದರು.
‘ಅವರು ಜಾರಿಗೆ ತಂದ ಲೋಕಪಾಲ್ ಮಸೂದೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಾಕ್ಷಿಯಾಯಿತು’ ಎಂದೂ ನೆನೆದರು.
‘ಅವರಿಗೆ ಹೆಚ್ಚು ಜನಮನ್ನಣೆ ಸಿಗದೇ ಇರಬಹುದು. ಆದರೆ, ಅವರು ಜಗತ್ತಿನ ಇತಿಹಾಸದಲ್ಲಿ ಅಜರಾಮರ’ ಎಂದು ಹೇಳಿದರು.
‘1966ರಲ್ಲಿ ಲಾಲ್ಬಹಾದ್ದೂರ ಶಾಸ್ತ್ರಿ ಅವರು ಅಡಿಪಾಯ ಹಾಕಿದ ಮೇಲೆ ಆಲಮಟ್ಟಿ ಅಣೆಕಟ್ಟೆಯನ್ನು ಕಟ್ಟಲು ಆಗಿರಲಿಲ್ಲ. ನಾನು ಹೋಗಿ ಮನಮೋಹನಸಿಂಗ್ ಅವರ ಬಳಿ ಕೇಳಿದಾಗ ‘ಇರಿಗೇಷನ್ ಬಾಂಡ್’ ಮಂಜೂರು ಮಾಡಿ, ಆಲಮಟ್ಟಿ ಡ್ಯಾಮನ್ನು ಎರಡೇ ವರ್ಷದಲ್ಲಿ 513 ಮೀಟರ್ ಎತ್ತರದ ಅಣೆಕಟ್ಟೆ ನಿರ್ಮಿಸಲು ನೆರವಾದರು’ ಎಂದೂ ಹೇಳಿದರು.
‘ಆಧಾರ್ ಕಾರ್ಡ್, ವ್ಯಾಟ್ ಮಂಜೂರು ಮಾಡಿದ್ದು ಅವರು ಹಿರಿಮೆ. 2007ರಲ್ಲಿ ಜಗತ್ತಿನ ಎಲ್ಲ ಬ್ಯಾಂಕುಗಳೂ ದಿವಾಳಿ ಆದಾಗ ಭಾರತದ ಬ್ಯಾಂಕುಗಳು ಮಾತ್ರ ಭದ್ರವಾದವು. ಅಮೆರಿಕದ ಬ್ಯಾಂಕಿಂಗ್ ಚೇತರಿಗೆ ಸೂತ್ರ ನೀಡಿದ್ದು ಇದೇ ಮನಮೋಹನ ಸಿಂಗ್ ಎಂಬುದು ನಮ್ಮ ಹೆಮ್ಮೆ’ ಎಂದರು.
ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಅವರು ಅಧಿಕಾರಕ್ಕೆ ಬಂದಾಗ ದೇಶದಲ್ಲಿ 18 ಕೋಟಿ ಮಾತ್ರ ಮಧ್ಯಮ ವರ್ಗದ ಕುಟುಂಬಗಳಿದ್ದವು. ಕೆಲವೇ ವರ್ಷಗಳಲ್ಲಿ 36 ಕೋಟಿಗೆ ಏರಿದ್ದು ಅವರ ಆರ್ಥಿಕ ಶಕ್ತಿಯಿಂದ. ಬಡರಾಷ್ಟ್ರ ಎಂದು ಕರೆಯುತ್ತಿದ್ದ ದೇಶವನ್ನು ಪ್ರಗತಿಶೀಲ ದೇಶ ಎಂಬ ಕೀರ್ತಿ ತಂದುಕೊಟ್ಟಿದ್ದು ಇದೇ ಮನಮೋಹನ ಸಿಂಗ್ ಅವರು’ ಎಂದರು.
‘ನಾಯಕಿ ಸೋನಿಯಾ ಗಾಂಧಿ ಅವರ ವಿಶ್ವಾಸವನ್ನು ಪೂರ್ಣ ಗಳಿಸಿಕೊಂಡಿದ್ದರು. ಸೋನಿಯಾ ಗಾಂಧಿ ಅವರು ತ್ಯಾಗದ ನಿಲುವು, ದೂರದೃಷ್ಟಿಯ ಕಾರಣ ಮನಮೋಹನಸಿಂಗ್ ಅವರು ಪ್ರಧಾನಿ ಆದರು. ಅದು ಅತ್ಯಂತ ಸಾರ್ಥಕವಾದ ದಿನ. ಸಿನಿಮಾ ನೋಡಿದ ಮೇಲೆ ಜನ ‘ಸಿಂಗ್ ಈಸ್ ಕಿಂಗ್’ ಎಂದು ಇಡೀ ದೇಶವೇ ಅಭಿದಾನ ನೀಡಿತ್ತು’ ಎಂದರು.
ಹಲವರು ಸಚಿವರು, ಶಾಸಕರು, ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೂ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.