ADVERTISEMENT

ಮೇಕೆದಾಟು | ಯೋಜನಾ ವೆಚ್ಚ ₹14,500 ಕೋಟಿಗೆ ಏರಿಕೆ: ಸುಪ್ರೀಂ ಕೋರ್ಟ್‌ಗೆ ಸರ್ಕಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ಮೇಕೆದಾಟು ಪ್ರದೇಶ</p></div>

ಮೇಕೆದಾಟು ಪ್ರದೇಶ

   

ನವದೆಹಲಿ: ಪ್ರಸ್ತಾವಿತ ಮೇಕೆದಾಟು ಯೋಜನೆ ಕುರಿತ ಅರ್ಜಿಯ ವಿಚಾರಣೆಯನ್ನು ಇದೇ 23ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿತು. 

‘ವಿಳಂಬವಾದಷ್ಟು ಯೋಜನಾ ವೆಚ್ಚದಲ್ಲಿ ಗಮನಾರ್ಹ ಏರಿಕೆ ಆಗಲಿದೆ. 2023–24ರ ಲೆಕ್ಕಾಚಾರದ ಪ್ರಕಾರ, ಯೋಜನಾ ವೆಚ್ಚವು ₹14,500 ಕೋಟಿಗೆ ಏರಿದೆ. ಹೀಗಾಗಿ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ರಾಜ್ಯ ಸರ್ಕಾರ ವಾದಿಸಿತು. ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರವು 2019ರಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಿತ್ತು. ಯೋಜನೆಗೆ  ₹9,000 ಕೋಟಿ ವೆಚ್ಚ ಆಗಲಿದೆ ಎಂದು ತಿಳಿಸಿತ್ತು. 

ADVERTISEMENT

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನಿಶಾಂತ್‌ ಪಾಟೀಲ ಮಾಡಿದ ಮನವಿಯ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಕರ್ನಾಟಕದ ಅರ್ಜಿಯನ್ನು ಪರಿಗಣಿಸಲು ನಿರ್ಧರಿಸಿತು.

ಯೋಜನೆ ಬಗ್ಗೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ 2023ರ ಸೆಪ್ಟೆಂಬರ್‌ 21ರಂದು ನಡೆದಿತ್ತು. ವಿಚಾರಣೆಯನ್ನು ಎರಡು ವಾರ ಮುಂದೂಡಿತ್ತು. ಆ ಬಳಿಕ ಪ್ರಕರಣ ವಿಚಾರಣೆಗೇ ಬಂದಿಲ್ಲ ಎಂದು ಪಾಟೀಲ ಅವರು ನ್ಯಾಯಪೀಠದ ಗಮನಕ್ಕೆ ತಂದರು. 

ರಾಜ್ಯ ಸರ್ಕಾರದ ವಾದವೇನು?: ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ರಾಜ್ಯ ಸರ್ಕಾರವು ಆಗಸ್ಟ್‌ 28ರಂದು ಅರ್ಜಿ ಸಲ್ಲಿಸಿದ್ದು, ಬೆಂಗಳೂರು ನಗರದ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಈ ಯೋಜನೆಯ ಅನುಷ್ಠಾನ ತುರ್ತು ಅಗತ್ಯ ಎಂದು ಪ್ರತಿಪಾದಿಸಿದೆ. 

ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶಕ್ಕೆ ಅನುಗುಣವಾಗಿ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ನಿಗದಿಪಡಿಸಿದಷ್ಟೇ ನೀರು ಹರಿಸಲು ಈ ಯೋಜನೆ ಮಹತ್ವದ್ದು ಎಂದು ರಾಜ್ಯ ಸರ್ಕಾರ ತಿಳಿಸಿದೆ. 

ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು 4.75 ಟಿಎಂಸಿ ಅಡಿ ನೀರನ್ನು ಸುಪ್ರೀಂ ಕೋರ್ಟ್‌ ಹಂಚಿಕೆ ಮಾಡಿದೆ. ಈ ನೀರನ್ನು ಬಳಸಲು ಈ ಯೋಜನೆ ಅನಿವಾರ್ಯ. ಜತೆಗೆ, ಮೇಕೆದಾಟು ಯೋಜನೆಯ ಮೂಲಕ ವಾರ್ಷಿಕವಾಗಿ 400 ಮೆಗಾವಾಟ್‌ ಜಲವಿದ್ಯುತ್ ಉತ್ಪಾದಿಸಲು ಯೋಜಿಸಲಾಗಿದೆ ಎಂದೂ ಹೇಳಿದೆ.  

‘ಯೋಜನೆ ಅನುಷ್ಠಾನ ಪ್ರಶ್ನಿಸಿ ತಮಿಳುನಾಡು ರಾಜ್ಯವು ಹಲವು ಅರ್ಜಿಗಳನ್ನು ಸಲ್ಲಿಸಿದೆ. ಈ ಯೋಜನೆಯಿಂದಾಗಿ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಯೋಜನೆಯಿಂದಾಗಿ ಆ ರಾಜ್ಯಕ್ಕೆ ಅನುಕೂಲವೇ ಆಗಲಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಈ ಜಲಾಶಯದ ಮೂಲಕ ಸಂಗ್ರಹಿಸಬಹುದು’ ಎಂದೂ ಸರ್ಕಾರ ತಿಳಿಸಿದೆ. 

‘ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಜನರು ಪಾದಯಾತ್ರೆ ಇತ್ಯಾದಿಗಳನ್ನು ನಡೆಸುವ ಮೂಲಕ ನಿರಂತರ ಒತ್ತಡ ಹೇರುತ್ತಿದ್ದಾರೆ. ಜತೆಗೆ, ಯೋಜನೆಯ ಅನುಷ್ಠಾನಕ್ಕೆ ಯಾವುದೇ ಕಾನೂನು ತೊಡಕು ಇಲ್ಲ ಎಂದೂ ಹೇಳಿದ್ದಾರೆ. ವಿಳಂಬವಾದಷ್ಟು ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಲಿದೆ ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ’ ಎಂದು ರಾಜ್ಯ ಗಮನ ಸೆಳೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.