ADVERTISEMENT

ಆ ವ್ಯಕ್ತಿ ಯಾರು? ಕಾಂಗ್ರೆಸ್‌ಗೆ ಯಾವಾಗ ಬಂದರು?: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 13:20 IST
Last Updated 6 ಮಾರ್ಚ್ 2024, 13:20 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಕೋಲಾರ: ‘ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಟಿಕೆಟ್‌ ಅಂತಿಮವಾಗಿಲ್ಲ. ಟಿಕೆಟ್‌ ಸಿಗದೆ ನೋವಾಗಿ ಕೆಲವರು ಏನಾದರೂ ಹೇಳುತ್ತಿರುತ್ತಾರೆ. ಆ ವ್ಯಕ್ತಿ ಯಾರು? ಕಾಂಗ್ರೆಸ್‌ಗೆ ಯಾವಾಗ ಬಂದರು? ಶಾಸಕರು, ಸ್ಥಳೀಯ ಮುಖಂಡರು ಅಭಿಪ್ರಾಯ ಆಲಿಸಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್‌ ಘೋಷಣೆ ಮಾಡಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಮಂಡ್ಯ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಅಸಮಾಧಾನಗೊಂಡು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಎಚ್‌.ಎನ್‌.ರವೀಂದ್ರ ಕುರಿತು ಬುಧವಾರ ಬಂಗಾರಪೇಟೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಯಾರೋ ಕಿಡಿಗೇಡಿಗಳು ಬಂದು ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿರುವುದು ನಮಗೆಲ್ಲರಿಗೂ ನೋವು ಉಂಟು ಮಾಡಿದೆ. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಥವರ ಮೇಲೆ ಖಂಡಿತ ಶಿಕ್ಷೆ ಆಗಲಿದೆ. ಇಂಥ ಕೃತ್ಯಗಳಿಗೆ ನಾವು ಯಾರೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌ ಮಾತ್ರವಲ್ಲ; ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಬೆಂಬಲಿಸುವುದಿಲ್ಲ. ಆದರೆ, ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದರು.

ADVERTISEMENT

‘ದೇಶದಲ್ಲಿ ಈ ಹಿಂದೆ ಇಂಥ ಘಟನೆ ವಿವಿಧೆಡೆ ನಡೆದಿದೆ. ಆಗ ಎಫ್‌ಎಸ್‌ಎಲ್‌ ವರದಿ ಬಂದಾಗ ಆ ರೀತಿ ಹೇಳಿಲ್ಲ ಎಂಬುದೂ ಸಾಬೀತಾಗಿದೆ. ಆದರೆ, ಈಗ ನಡೆದಿರುವ ಕೃತ್ಯವನ್ನು ನಾನು ಸೇರಿದಂತೆ ಎಲ್ಲರೂ ಖಂಡಿಸಿದ್ದು, ಯಾರೂ ಸಮರ್ಥಿಸಿಕೊಂಡಿಲ್ಲ. ಎಫ್‌ಎಸ್‌ಎಲ್‌ ವರದಿಗೂ ಮುನ್ನವೇ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ಖಂಡಿತ ಅವರಿಗೆ ಶಿಕ್ಷೆಯಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.