ADVERTISEMENT

ಮಹಿಳೆ‌ ಕೆನ್ನೆಗೆ ಏಟು: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 11:14 IST
Last Updated 23 ಅಕ್ಟೋಬರ್ 2022, 11:14 IST
ಸಚಿವ ಸೋಮಣ್ಣ
ಸಚಿವ ಸೋಮಣ್ಣ   

ಕೊಳ್ಳೇಗಾಲ (ಚಾಮರಾಜನಗರ): ಗುಂಡ್ಲುಪೇಟೆ ತಾಲ್ಲೂಕಿನ ಹಂಗಳದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯ ಕೆನ್ನೆಗೆ ಹೊಡೆದಿರುವ ಪ್ರಕರಣ ಸಂಬಂಧ ವಸತಿ, ಮೂಲ ಸೌಕರ್ಯ ಹಾಗೂ‌ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾನುವಾರ ಕ್ಷಮೆಯಾಚನೆ ಮಾಡಿದ್ದಾರೆ.

ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, '45 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು‌ ಕಂಡಿದ್ದೇನೆ. ಶನಿವಾರದ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನೂ ಮಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದರು.

'ಅದು ಘಟನೆಯೇ ಅಲ್ಲ. ಆ ಹೆಣ್ಣು‌ಮಗಳು ಪದೇ ಪದೇ ವೇದಿಕೆ ಮೇಲೆ‌ ಬರುತ್ತಿದ್ದಳು. 'ತಾಯಿ ಎಷ್ಟು ಸಾರಿ‌ ಬರುತ್ತೀಯಾ' ಎಂದು ವಿಚಾರಿಸಿದೆ. 'ನಿನ್ನ ಸಮಸ್ಯೆ‌ ಬಗೆಹರಿಸುತ್ತೇನೆ' ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆಯೇ ವಿನಾ ಬೇರೆ‌ ಉದ್ದೇಶ ಇರಲಿಲ್ಲ' ಎಂದು ಹೇಳಿದರು.

ADVERTISEMENT

'ಹೆಣ್ಣು ಮಕ್ಕಳ ಬಗ್ಗೆ ನನಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಪ್ರತಿಯೊಬ್ಬರನ್ನು ಅಮ್ಮ, ತಾಯಿ ಎಂದೇ ಕರೆಯುತ್ತೇನೆ. ಆ ಹೆಣ್ಣು ಮಗಳಿಗೂ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಸೋಮಣ್ಣ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.