
ಬೆಂಗಳೂರು: ‘ಕಳೆದ ಮೂರು ವರ್ಷಗಳಲ್ಲಿ ಜೈನ, ಬೌದ್ಧ, ಸಿಖ್ ಸಮುದಾಯದ ಸಂಘ ಸಂಸ್ಥೆಗಳಿಗೂ ಸಮುದಾಯ ಭವನ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ನೀಡಲಾಗಿದೆ’ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ. ಝೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
‘ಜೈನ ಸಮುದಾಯಕ್ಕೆ 148 ಭವನಗಳಿಗೆ ₹26 ಕೋಟಿ, ಬೌದ್ಧ ಸಮುದಾಯಕ್ಕೆ 11 ಭವನಗಳಿಗೆ ₹3 ಕೋಟಿ, ಸಿಖ್ ಸಮುದಾಯದ ಒಂದು ಭವನಕ್ಕೆ ₹50 ಲಕ್ಷ, ಕ್ರಿಶ್ಚಿಯನ್ ಸಮುದಾಯದ 188 ಭವನಗಳಿಗೆ ₹47 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ’ ಎಂದು ವಿವರಿಸಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಬಹುಪಯೋಗಿ ಭವನ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡಿರುವುದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜಮೀರ್, ‘ಅಶೋಕ ಅವರು ಮುಸ್ಲಿಂ ತುಷ್ಟೀಕರಣ ಎಂದು ಹೇಳಿರುವುದು ಸರಿಯಲ್ಲ. ಪ್ರತಿ ವಿಚಾರಕ್ಕೂ ಬೇರೆ ಬಣ್ಣ ನೀಡುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದಿದ್ದಾರೆ.
‘ಮುಸ್ಲಿಂ ಸಮುದಾಯದ ಶಾದಿ ಮಹಲ್ ನಿರ್ಮಾಣಕ್ಕೆ ಎಲ್ಲ ಸರ್ಕಾರದ ಅವಧಿಯಲ್ಲೂ ಅನುದಾನ ಒದಗಿಸಲಾಗುತ್ತಿದೆ. ಅದೇ ರೀತಿ ಈಗಲೂ ನೀಡಲಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.