ADVERTISEMENT

ರಾಜ್ಯದಲ್ಲಿ ಕೋತ್ವಾಲ್‌ ಶಿಷ್ಯನಿಂದ ಗೂಂಡಾ ರಾಜಕೀಯ: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 14:32 IST
Last Updated 21 ಜನವರಿ 2024, 14:32 IST
<div class="paragraphs"><p>ಶಾಸಕ ರಮೇಶ ಜಾರಕಿಹೊಳಿ</p></div>

ಶಾಸಕ ರಮೇಶ ಜಾರಕಿಹೊಳಿ

   

ಕಾಗವಾಡ (ಬೆಳಗಾವಿ ಜಿಲ್ಲೆ): ‘ರಾಜ್ಯದಲ್ಲಿ ಕೋತ್ವಾಲ್‌ ಶಿಷ್ಯನ ಆಡಳಿತ ನಡೆಯುತ್ತಿದೆ. ಇದರಿಂದ ಭ್ರಷ್ಟಾಚಾರ ಹಾಗೂ ಗೂಂಡಾ ರಾಜಕೀಯ ಹೆಚ್ಚಿದೆ. ಇದು ಬಹಳ ದಿನ ನಡೆಯುವುದಿಲ್ಲ‌’ ಎಂದು ಶಾಸಕ ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ಮುನ್ನ ಅಥವಾ ನಂತರದಲ್ಲಿ ಈ ಸರ್ಕಾರ ಪತನವಾಗಲಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಅವರ ಬಗ್ಗೆ ಅಪಾರ ಗೌರವವಿದೆ. 2018ರಲ್ಲಿ ಮುಖ್ಯಮಂತ್ರಿ ಇದ್ದಂತೆ ಈಗ ಅವರಿಲ್ಲ. ಈಗ ಅವರನ್ನು ಪ್ರಾಮಾಣಿಕವಾಗಿ ಕೆಲಸ ಮಾಡಲು ಡಿ.ಕೆ.ಶಿವಕುಮಾರ್‌ ಬಿಡುತ್ತಿಲ್ಲ. ಪಕ್ಷದ ಹೈಕಮಾಂಡ್‌ನಿಂದ ಒತ್ತಡ ತಂದು ಅವರ ಕೈಕಟ್ಟಿ ಹಾಕಿದ್ದಾನೆ’ ಎಂದು ದೂರಿದರು.

‘ಸಿ.ಡಿ ಪ್ರಕರಣದಲ್ಲಿ ನನ್ನನ್ನು ಶಿಕ್ಷೆಗೆ ಒಳಪಡಿಸಬೇಕು ಎಂದುಕೊಂಡಿದ್ದ ಶಿವಕುಮಾರ್‌ ವಿಫಲನಾದ. ಹಾಗಾಗಿ ಆತ ಹಾಗೂ ಬೆಳಗಾವಿಯ ವಿಷಕನ್ಯೆ ಪ್ರಭಾವ ಬೀರಿ, ನನ್ನ ಮೇಲೆ 420 ಕೇಸ್ ಹಾಕಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಕಟ್ಟಿಹಾಕುವ ಅವರ ಪ್ರಯತ್ನ ನಡೆಯುವುದಿಲ್ಲ. ನಾನೂ ಕಾನೂನು ಹೋರಾಟ ಮುಂದುವರಿಸುತ್ತೇನೆ’ ಎಂದರು.

‘ರಾಜಕೀಯದಲ್ಲಿ ಯಾರೂ ದ್ವೇಷದ ರಾಜಕಾರಣ ಮಾಡಬಾರದು. ಇಂದು ಅಧಿಕಾರದಲ್ಲಿ ಇದ್ದವರು ನಾಳೆ ಇರುವುದಿಲ್ಲ. ಹಾಗಾಗಿ ಅಧಿಕಾರಿಗಳೂ ಪಕ್ಷಪಾತ ಮಾಡದೆ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.