ADVERTISEMENT

ಅಗ್ನಿ ಆಕಸ್ಮಿಕಕ್ಕೆ 25ಕ್ಕೂ ಹೆಚ್ಚು ಗುಡಿಸಲು ಭಸ್ಮ

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸುವರ್ಣಮುಖಿ ಬಡಾವಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:05 IST
Last Updated 13 ಮಾರ್ಚ್ 2019, 20:05 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯ ಸುವರ್ಣಮುಖಿ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟಿರುವ  ಗುಡಿಸಲುಗಳು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯ ಸುವರ್ಣಮುಖಿ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟಿರುವ  ಗುಡಿಸಲುಗಳು   

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿಯ ಸುವರ್ಣಮುಖಿ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 25ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಶೌಕತ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ರಾತ್ರಿ 12 ಗಂಟೆ ಸಮಯದಲ್ಲಿ ಬೀಡಿ ಕಟ್ಟುತ್ತಿದ್ದೆ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕಾಂಪೌಂಡ್ ಪಕ್ಕದಲ್ಲಿದ್ದ ಈರಣ್ಣ ಅವರ ಮನೆಗೆ ಬೆಂಕಿ ಹತ್ತಿದ್ದು, ತಕ್ಷಣ ಜೋರಾಗಿ ಕೂಗಿಕೊಂಡು ಎಲ್ಲರನ್ನು ಎಬ್ಬಿಸಿದೆ. ಬೆಂಕಿ ಕ್ಷಣಮಾತ್ರದಲ್ಲಿ ಎಲ್ಲ ಕಡೆ ಹರಡಿತು. ಮನೆಯಲ್ಲಿದ್ದ ಏನನ್ನೂ ಹೊರಗೆ ತರಲು ಆಗಲಿಲ್ಲ. ಅಷ್ಟರಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು, ಅದರ ತುಣುಕೊಂದು ಶೌಕತ್ ಅವರ ಬೆನ್ನಿನ ಕೆಳಭಾಗಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದಾರೆ’ ಎಂದು ಬಡಾವಣೆಯ ನಿವಾಸಿ ತಾಜುನ್ನೀಸಾ ತಿಳಿಸಿದರು.

‘ಈ ಬಡಾವಣೆಯಲ್ಲಿ 45 ಕುಟುಂಬಗಳು ನೆಲೆಸಿದ್ದು, ಎಲ್ಲರೂ ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಮನೆಯಲ್ಲಿದ್ದ ಪುಡಿಗಾಸೂ ಸೇರಿ ಎಲ್ಲವೂ ಬೆಂಕಿಗೆ ಆಹುತಿಯಾಗಿವೆ. ನಮ್ಮ ಬದುಕು ಬೀದಿಗೆ ಬಿದ್ದಿದೆ. ತಾಜುನ್ನೀಸಾ ಎಲ್ಲರನ್ನೂ ಎಬ್ಬಿಸದೇ ಹೋಗಿದ್ದರೆ ಯಾರು ಬೆಂಕಿಗೆ ಆಹುತಿಯಾಗುತ್ತಿದ್ದೆವೋ ಹೇಳಲಾಗದು. ನಮಗೆ ಶಾಶ್ವತ ಸೂರು ಕಲ್ಪಿಸಿಕೊಡಿ’ ಎಂದುಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಫೀಜಾ ಬೇಗಂ ಅವರಿಗೆ ಸಂತ್ರಸ್ತರು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.