ಮೈಸೂರು: ‘ಕ್ಯಾಂಟೀನ್ಗೆ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಿಸಲಿಲ್ವಾ ಸಿದ್ದರಾಮಯ್ಯ ಅವರೇ’ ಎಂದು ಸಂಸದ ಪ್ರತಾಪ ಸಿಂಹ ಗುರುವಾರ ಇಲ್ಲಿ ಪ್ರಶ್ನಿಸಿದರು.
ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂಬಂಧ ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಪ್ರತಾಪ ಸಿಂಹ, ‘ಅವತ್ತು ನಿಮ್ಮ ಕಣ್ಣಿಗೆ ಕಂಡಿದ್ದು ಇಂದಿರಮ್ಮ ಹೆಸರು ಮಾತ್ರ’ ಎಂದು ಲೇವಡಿ ಮಾಡಿದರು.
‘ಸಿದ್ದರಾಮಯ್ಯ ಅವರೇ ಇಂತಹ ಆತ್ಮದ್ರೋಹದ ಮಾತು ಬಿಡಿ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ರಾಜಕಾರಣ ಮಾಡಿದರೆ ಮಾತ್ರ ನಿಮಗೆ ಉಳಿಗಾಲ. ಇಲ್ಲದಿದ್ದರೆ ನಿರ್ನಾಮ ಆಗಿಬಿಡ್ತೀರಾ’ ಎಂದು ಪ್ರತಾಪಸಿಂಹ ಕಿಡಿಕಾರಿದರು.
‘ನೆಹರು, ಇಂದಿರಾಗಾಂಧಿಯ ಭಜನೆ ಮಾತ್ರ ಕಾಂಗ್ರೆಸ್ಗೆ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳಲಿಲ್ಲ. ಹಾದಿ–ಬೀದಿಯ ಉದ್ಯಾನಗಳಿಗೆಲ್ಲಾ ರಾಜೀವ್ ಗಾಂಧಿ, ನೆಹರು, ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ, ಕಾಂಗ್ರೆಸ್ಗೆ ಯಾಕೆ ನೋವು’ ಎಂದು ಸಂಸದರು ಪ್ರಶ್ನಿಸಿದರು.
ಬೆಂಬಲಿಸಿ: ‘ವಿರೋಧವನ್ನೇ ಮಾಡಬೇಡಿ. ದೇಶಕ್ಕಾಗಿ ಪ್ರಾಣಕೊಟ್ಟವರ ಹೆಸರಿಡುವುದನ್ನು ವಿವಾದ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಬೆಂಬಲಿಸಿ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.