ಮೈಸೂರು: ‘ಸಣ್ಣ ಪುಟ್ಟ ಅಸಮಾಧಾನದಿಂದಲೋ, ಉದಾಸೀನದಿಂದಲೋ ಸ್ವಲ್ಪ ಮೈಮರೆತರೂ ರಾಜ್ಯದಲ್ಲಿ ಮುಂದೆ ತಾಲಿಬಾನಿ ಸರ್ಕಾರ ಬರಲಿದೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ನೆನಪಿಟ್ಟುಕೊಳ್ಳಬೇಕು. ರಾಷ್ಟ್ರವಾದಿ ಸರ್ಕಾರವನ್ನು ಮತ್ತೊಮ್ಮೆ ತರಲು ಶ್ರಮಿಸಬೇಕು’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ಇಲ್ಲಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
‘2015ರಲ್ಲಿ ಇಲ್ಲಿ ರಾಜು ಕೊಲೆಯಾಯ್ತು. ಆರೋಪಿಯನ್ನು ಪೊಲೀಸರು ಬಂಧಿಸಿದರು. ಆದರೆ, ನಗರ ಪೊಲೀಸ್ ಆಯುಕ್ತರನ್ನು ಎರಡೇ ತಿಂಗಳಲ್ಲೇ ವರ್ಗಾಯಿಸಲಾಯಿತು. ಆರೋಪಿಗೆ ಶಿಕ್ಷೆಯೇ ಆಗಲಿಲ್ಲ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜು ಕುಟುಂಬದರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಕೆಎಫ್ಡಿ, ಪಿಎಫ್ಐ ಸಂಘಟನೆಯವರ ಮೇಲಿದ್ದ 175 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡು, ನಮ್ಮ ಎರಡು ಡಜನ್ ಕಾರ್ಯಕರ್ತರ ಸಾವಿಗೆ ಕಾರಣವಾದರು. ಅಂತಹ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂದು ಹವಣಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ನಾವು ಕೆಲವೊಮ್ಮೆ ಕಾರ್ಯಕರ್ತರಿಗೆ ಸ್ಪಂದಿಸದಿರಲೂಬಹುದು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.