ADVERTISEMENT

ಎಂಎಸ್‌ಎಂಇ | ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ: ಡಾ. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 12:50 IST
Last Updated 3 ಜೂನ್ 2020, 12:50 IST

ಬೆಂಗಳೂರು: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸರ್ಕಾರದ ಕಡೆಯಿಂದ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ನುರಿತ ಕೆಲಸಗಾರರನ್ನು ಒದಗಿಸಲು ಎಂಜನಿಯರಿಂಗ್‌, ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಪೂರಕ ತರಬೇತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಾನಾ ಕ್ಷೇತ್ರದ ಉದ್ಯಮಿಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಬಿಸಿನೆಸ್‌ ನೆಟವರ್ಕ್‌ ಇಂಟರ್‌ನ್ಯಾಷನಲ್‌ನ ಬೆಂಗಳೂರಿನ ಉದ್ಯಮಿಗಳ ಜತೆ ಬುಧವಾರ ವೀಡಿಯೊ ಸಂವಾದ ನಡೆಸಿದ ನಂತರ ಅವರು ಮಾತನಾಡಿದರು.

"ಸುಧಾರಿತ ತಂತ್ರಜ್ಞಾನ ಅಳವಡಿಕೆ, ಕೌಶಲ ಅಭಿವೃದ್ಧಿ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ತಂದರೆ ಮಾರುಕಟ್ಟೆ ತನ್ನಿಂದ ತಾನೇ ಸೃಷ್ಟಿ ಆಗುವುದು. ಈ ನಿಟ್ಟಿನಲ್ಲಿ ಉದ್ದಿಮೆಗಳಿಗೆ ನುರಿತ ಕೆಲಸಗಾರರನ್ನು ಒದಗಿಸಲು ಎಂಜನಿಯರಿಂಗ್‌, ಡಿಪ್ಲೋಮಾ ಹಾಗೂ ಐಟಿಐಗಳಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲಾಗುವುದು. ಪಠ್ಯಕ್ರಮ ಬದಲಿಸಿ, ಉದ್ದಿಮೆ ಅವಶ್ಯಕತೆಗೆ ತಕ್ಕಂತೆ ತರಬೇತಿ ನೀಡಲಾಗುವುದು,"ಎಂದು ಅವರು ತಿಳಿಸಿದರು.

ADVERTISEMENT

"ರಾಜ್ಯದಲ್ಲಿ 27 ಸರ್ಕಾರಿ ಟೂಲ್‌ ರೂಂ ಮತ್ತು ತರಬೇತಿ ಕೇಂದ್ರಗಳಿದ್ದು, ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ನೀಡಲಾಗುತ್ತಿದ್ದು, ಶೇ.100ರಷ್ಟು ಉದ್ಯೋಗ ಖಾತ್ರಿ ನೀಡಲಾಗುತ್ತದೆ. ಸೀಮನ್ಸ್‌, ಪ್ರೊಮೆಟ್ರಿಕ್‌ ಮುಂತಾದ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಕೇಂದ್ರಗಳಲ್ಲಿ ಉದ್ದಿಮೆಗೆ ಪೂರಕವಾದ ತರಬೇತಿ ನೀಡಲಾಗುತ್ತಿದೆ. ಇದಲ್ಲದೇ, ಎಂಜನಿಯರಿಂಗ್‌ ಕಾಲೇಜುಗಳಲ್ಲಿ ಬಳಕೆಯಾಗದ ಸ್ಥಳವನ್ನು ಸ್ವಾಧೀನಕ್ಕೆ ಪಡೆದು ಅಲ್ಲಿ ತರಬೇತಿ ಕೇಂದ್ರ ನಡೆಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 10ನೇ ತರಗತಿ ನಂತರದ 4 ವರ್ಷದ ಕೋರ್ಸ್‌ ಜತೆಗೆ ಅಲ್ಪಾವಧಿ ತರಬೇತಿ ಕಾರ್ಯಮಗಳನ್ನು ನಡೆಸಲಾಗುತ್ತಿದೆ. ಎಂಜನಿಯರಿಂಗ್‌, ಡಿಪ್ಲೊಮಾ ಹಾಗೂ ಐಟಿಐ ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿಯನ್ನು ನೀಡಲಾಗುತ್ತದೆ,"ಎಂದರು.

"ರಾಜ್ಯದ 250 ಡಿಪ್ಲೊಮಾ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದ್ದು ಈ ನಿಟ್ಟಿನಲ್ಲಿ ನ್ಯಾಸ್ಕಾಮ್‌, ಮೈಕ್ರೊಸಾಫ್ಟ್‌ ಹಾಗೂ ಇತರ ಸಂಸ್ಥೆಗಳ ಸಹಯೋದಲ್ಲಿ ತರಬೇತಿ ನೀಡಲಾಗುತ್ತಿದೆ. ಕೃತಕ ಬುದ್ದಿಮತ್ತೆ, ಡೇಟಾ ಸೈನ್ಸ್‌, ರೊಬಾಟಿಕ್ಸ್‌, ಮಷೀನ್‌ ಲರ್ನಿಂಗ್‌ ಮುಂತಾದ ಸ್ನಾತಕೋತ್ತರ ಮಟ್ಟದ ಪಠ್ಯಕ್ರಮವನ್ನು ಡಿಪ್ಲೋಮಾ ಹಂತದಲ್ಲಿ ಕಲಿಸಲು ಉದ್ದೇಶಿಸಲಾಗಿದೆ. ಸರಿಯಾದ ಶಿಕ್ಷಣ, ಕೌಶಲ ಇಲ್ಲದಿದ್ದರೆ ಉದ್ದಿಮೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ,"ಎಂದರು.

ಆರ್ಥಿಕ ಸುಧಾರಣೆಗೆ ಸಹಕರಿಸಿ
"ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ರಾಜ್ಯದಲ್ಲಿ ಪ್ರತ್ಯೇಕ ಇಲಾಖೆ, ಸಚಿವಾಲಯ ಹಾಗೂ ಪ್ರತ್ಯೇಕ ನಿರ್ದೇಶನಾಲಯವೂ ಇದೆ. ಈ ವಲಯಕ್ಕೆ ಉತ್ತೇಜನ ನೀಡಲು 25ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸಬ್ಸಿಡಿ, ಸಾಲ ಸೌಲಭ್ಯ, ಮೂಲಸೌಕರ್ಯ, ಸಾಮರ್ಥ್ಯ ವರ್ಧನೆ, ಮಾರುಕಟ್ಟೆ ಸೌಕರ್ಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವು ಕಲ್ಪಿಸಲಾಗಿದೆ. ಉದ್ದಿಮೆದಾರರು ಈ ಸೌಲಭ್ಯಗಳ ಲಾಭ ಪಡೆದು ಆರ್ಥಿಕ ಸುಧಾರಣೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಲಾಯಿತು,"ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.