ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ₹ 100 ಕೋಟಿ ಮೌಲ್ಯದ 92 ನಿವೇಶನಗಳನ್ನು ಸೋಮವಾರ ಮುಟ್ಟುಗೋಲು ಹಾಕಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು ಕಳೆದುಕೊಂಡ ಭೂಮಿಗೆ ಪರಿಹಾರಾತ್ಮಕವಾಗಿ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದ ತನಿಖೆ ಆರಂಭಿಸಿದ್ದ ಇ.ಡಿಯು, 1,000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಅವಧಿಯಲ್ಲಿ, ಅಕ್ರಮ ಹಂಚಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿವೆ ಎಂದು ಇ.ಡಿ ಹೇಳಿತ್ತು.
ಪ್ರಾಧಿಕಾರವು ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಪರಿಹಾರ ನೀಡದಿದ್ದ ಮತ್ತು ಪರಿಹಾರದ ನಿವೇಶನಗಳು ಹಂಚಿಕೆ ಆಗದೇ ಇರುವ ಪ್ರಕರಣಗಳನ್ನೇ ಅಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ರಿಯಲ್ ಎಸ್ಟೇಟ್ ಉದ್ಯಮಿಗಳು ಮೂಲ ಮಾಲೀಕರಿಂದ ಜಿಪಿಎ ಮಾಡಿಸಿಕೊಂಡು, ಮುಡಾಗೆ ಪರಿಹಾರ ಅರ್ಜಿ ಸಲ್ಲಿಸುತ್ತಿದ್ದರು. ಮುಡಾವು ಅದಕ್ಕೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿತ್ತು ಎಂದು ಇ.ಡಿ ಮೂಲಗಳು ತಿಳಿಸಿವೆ.
ದಿನೇಶ್ ಅವರ ಸುಪರ್ದಿಯಲ್ಲೇ ಈ ಅಕ್ರಮಗಳೆಲ್ಲವೂ ನಡೆದಿವೆ. ನಿವೇಶನ ಹಂಚಿಕೆ ಮಾಡಿದ್ದಕ್ಕೆ ಪ್ರತಿಯಾಗಿ ದಿನೇಶ್ ಅವರು ಬಂಗಲೆ, ಕೃಷಿ ಜಮೀನು, ವಾಣಜ್ಯ ಸಂಕೀರ್ಣ, ಐಷಾರಾಮಿ ಕಾರುಗಳು ಮತ್ತು ಹಣವನ್ನು ಉಡುಗೊರೆಯಾಗಿ ಪಡೆದಿದ್ದರು. ಆ ಹಣದಿಂದ ಮತ್ತಷ್ಟು ಆಸ್ತಿಗಳನ್ನು ಖರೀದಿಸಿದ್ದರು ಎಂದು ಹೇಳಿವೆ.
ಈ ರೀತಿ ಹಂಚಿಕೆ ಆಗಿದ್ದ ₹300 ಕೋಟಿ ಮೌಲ್ಯದ 160 ನಿವೇಶನಗಳನ್ನು ಇ.ಡಿ ಈ ಹಿಂದೆಯೇ ಮುಟ್ಟುಗೋಲು ಹಾಕಿಕೊಂಡಿತ್ತು. ಈಗ ಮತ್ತೆ 92 ಸೇರಿ ಒಟ್ಟು 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಈ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹400 ಕೋಟಿ ದಾಟುತ್ತದೆ ಎಂದು ಇ.ಡಿ ಮಾಹಿತಿ ನೀಡಿದೆ.
ಸೋಮವಾರ ಮುಟ್ಟುಗೋಲು ಹಾಕಿಕೊಳ್ಳಲಾದ ನಿವೇಶನಗಳಲ್ಲಿ ಬೆಂಗಳೂರು ಮತ್ತು ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು, ಮೈಸೂರಿನ ಗೃಹ ನಿರ್ಮಾಣ ಸಹಕಾರ ಸಂಘ, ಮುಡಾ ಆಯುಕ್ತರಾಗಿದ್ದ ದಿನೇಶ್ ಸಂಬಂಧಿಗಳು ಮತ್ತು ಮುಡಾದ ಕೆಲ ಅಧಿಕಾರಿಗಳ ಕುಟುಂಬದವರ ಹೆಸರಿನಲ್ಲಿದ್ದ ನಿವೇಶನಗಳು ಸೇರಿವೆ. ತನಿಖೆ ಮುಂದುವರೆದಿದೆ ಎಂದು ಇ.ಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.