ಮಂಗಳೂರು: ‘ನಾಮಪತ್ರ ವಾಪಸ್ ಪಡೆಯಲು ಯಾರಿಂದಲೂ ನಯಾಪೈಸೆ ಪಡೆದಿಲ್ಲ. ಹೈಕಮಾಂಡ್ ಆದೇಶದ ಅನ್ವಯ ನಾಮಪತ್ರ ಹಿಂದಕ್ಕೆ ಪಡೆದು ಮೈತ್ರಿ ಧರ್ಮ ಪಾಲಿಸಿದ್ದೆ. ಇದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ನಿಂತು ಸ್ಪಷ್ಟಪಡಿಸುತ್ತಿರುವೆ’ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಎಸ್.ಪಿ. ಮುದ್ದಹನುಮೇಗೌಡ ಹೇಳಿದರು.
ಗುರುವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ನಂತರದ ಬೆಳವಣಿಗೆಗಳು ಮನಸ್ಸಿಗೆ ತುಂಬಾ ನೋವು ತಂದಿವೆ. ಮುದ್ದಹನುಮೇಗೌಡ ಕೋಟಿಗಟ್ಟಲೆ ಹಣದ ಡೀಲ್ ಮಾಡಿಕೊಂಡು ನಾಮಪತ್ರ ವಾಪಸ್ ಪಡೆದುಕೊಂಡರು ಎಂಬ ಆಡಿಯೊ ಬಗ್ಗೆ ಯಾರಾದರೂ ದೊಡ್ಡವರೇ ನಿರಾಕ
ರಿಸಿ, ಸ್ಪಷ್ಟಪಡಿಸಬಹುದಿತ್ತು. ಆದರೆ, ಯಾರೂ ಬಾಯಿ ಬಿಡಲಿಲ್ಲ. ಅದಕ್ಕಾಗಿಯೇ ಇಲ್ಲಿಗೆ ಬಂದು ಸ್ಪಷ್ಟನೆ ನೀಡುವ ಅನಿವಾರ್ಯತೆ ಎದುರಾಯಿತು’ ಎಂದು ಯಾರ ಹೆಸರನ್ನೂ ಹೇಳದೆ ಬೇಸರ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ಯಾವುದೇ ಸ್ಥಾನಮಾನ ಇಲ್ಲದ ಅನಾಮಧೇಯ ಇಬ್ಬರು ಮಾಡಿರುವ ಸಂಭಾಷಣೆಗೆ ನಾನೂ ಬೆಲೆ ಕೊಡಲ್ಲ. ಆದರೆ, ಇಷ್ಟು ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕೆಯಿಲ್ಲದೇ ರಾಜಕಾರಣ ಮಾಡಿಕೊಂಡು ಬಂದಿರುವ ನನಗೆ ರಾಜಕೀಯವಾಗಿ ಹಿನ್ನಡೆ ಉಂಟು ಮಾಡುವ ಸಂಭಾಷಣೆ ಈ ಆಡಿಯೊದಲ್ಲಿ ಇದೆ. ಈ ಬಗ್ಗೆ ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿತ್ತು’ ಎಂದು ಹೇಳಿದರು.
‘ನಾನು ಕಟ್ಟಾ ಕಾಂಗ್ರೆಸ್ಸಿಗ. ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಈ ಆಡಿಯೊ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆಯೂ ಸೂಚಿಸಿದ್ದಾರೆ. ಸೋಲು, ಗೆಲುವಿನ ಬಗ್ಗೆ ಏನನ್ನೂ ಹೇಳಲಾರೆ. ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗಾಗಿ ಎಲ್ಲರೂ ಶ್ರಮಿಸಿದ್ದೇವೆ. ಎಲ್ಲವೂ ಮತದಾರನ ತೀರ್ಪಿನ ಮೇಲೆ ನಿಂತಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.