ADVERTISEMENT

ಮೈಸೂರು ದಸರಾ: ಅಂಬಾರಿ ಹೊರಲು ಸಿದ್ಧವಾದ ಅಭಿಮನ್ಯು

ಕೊಡಗು: ಮತ್ತಿಗೋಡು ಶಿಬಿರದಿಂದ ಅಂಬಾರಿ ಹೊರುವ 2ನೇ ಆನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 10:34 IST
Last Updated 15 ಸೆಪ್ಟೆಂಬರ್ 2020, 10:34 IST
ಅಭಿಮನ್ಯು
ಅಭಿಮನ್ಯು   

ಗೋಣಿಕೊಪ್ಪಲು (ಕೊಡಗು): ಮತ್ತಿಗೋಡು ಸಾಕಾನೆ ಶಿಬಿರದ ಬಲಾಢ್ಯ ಆನೆಯಾದ ಅಭಿಮನ್ಯು ಈ ಬಾರಿ ಮೈಸೂರು ದಸರಾ ಅಂಬಾರಿ ಹೊರಲು ಸಿದ್ಧವಾಗಿದೆ.ಅಭಿಮನ್ಯು, 750 ಕೆ.ಜಿಯ ಚಿನ್ನದ ಅಂಬಾರಿ ಹೊರಲಿದ್ದಾನೆ.

ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಬಾರಿ ಹೊರಲು 54ರ ಹರೆಯದ ಅಭಿಮನ್ಯುವನ್ನು ಆಯ್ಕೆ ಮಾಡಲಾಗಿದೆ’ ಎಂದು ದಸರಾ ಅಂಬಾರಿ ಆನೆ ಜವಾಬ್ದಾರಿ ಹೊತ್ತಿರುವ ಮೈಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್ ತಿಳಿಸಿದ್ದಾರೆ.

ಅಭಿಮನ್ಯು ಜತೆಗೆ ದಸರಾದಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆ ಸಾಕಾನೆ ಶಿಬಿರದ ವಿಕ್ರಂ (58), ಹರ್ಷ (54), ವಿಜಯ (53), ಕಾವೇರಿ (50), ಗೋಪಿ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈ ಆನೆಗಳು ಅಕ್ಟೋಬರ್‌ 2ರಂದು ಸಂಪ್ರದಾಯದಂತೆ ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿ ಬಳಿಕ ಮೈಸೂರಿಗೆ ತೆರಳಲಿವೆ.

ಮತ್ತಿಗೋಡು ಶಿಬಿರದಿಂದ ಅಂಬಾರಿ ಹೊರುವ ಎರಡನೇ ಆನೆ ಅಭಿಮನ್ಯು ಆಗಿದೆ. ಹಿಂದೆ ಇದೇ ಶಿಬಿರದಲ್ಲಿದ್ದ ಬಲರಾಮ ಆನೆ ಕೂಡ ಅಂಬಾರಿ ಹೊರುತ್ತಿತ್ತು. ಅದರ ನಿವೃತ್ತಿಯ ಬಳಿಕ ಈ ಜವಾಬ್ದಾರಿ ಅರ್ಜುನನ ಹೆಗಲೇರಿತ್ತು. ಅಭಿಮನ್ಯುವನ್ನು ಮಾವುತ ವಸಂತ, ಕಾವಾಡಿ ಜೆ.ಕೆ.ರಾಜು ಮುನ್ನಡೆಸಲಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.