ಮೈಸೂರು/ಎಚ್.ಡಿ.ಕೋಟೆ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಜಯದಶಮಿಯ ನಿಮಿತ್ತ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕು ಬೇಗೂರು ಗ್ರಾಮದ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿದರು.
ನಾಗರಹೊಳೆ ಸಂರಕ್ಷಿತ ಪ್ರದೇಶದ ಸಮೀಪದಲ್ಲಿರುವ ದೇವಸ್ಥಾನದಲ್ಲಿ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಿದರು. ಹೊರಾವರಣದಲ್ಲಿ ಕುರ್ಚಿಯಲ್ಲಿ ಕುಳಿತು ಐದು ನಿಮಿಷಗಳವರೆಗೆ ಧ್ಯಾನ ಮಾಡಿದರು. ಪ್ರದಕ್ಷಿಣೆ ಹಾಕಿ ನಮಿಸಿದರು.
ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮೊದಲಾದವರು ಇದ್ದರು. ‘ಇತಿಹಾಸ ಪ್ರಸಿದ್ಧವಾದ ಈ ದೇವಸ್ಥಾನಕ್ಕೆ ತೆರಳಲು ಅಧ್ಯಕ್ಷರು ಸ್ವತಃ ಆಸಕ್ತಿ ವ್ಯಕ್ತಪಡಿಸಿದರು’ ಎಂದು ಶಾಸಕರು ತಿಳಿಸಿದರು.
ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿರುವ ಅವರು, ಎಚ್.ಡಿ.ಕೋಟೆ ತಾಲ್ಲೂಕಿನ ಬೀರಂಬಳ್ಳಿ ಸಮೀಪದಲ್ಲಿರುವ ‘ಆರೆಂಜ್ ಕೌಂಟಿ’ ರೆಸಾರ್ಟ್ನಲ್ಲಿ ತಂಗಿದ್ದಾರೆ. ದಸರಾ ಹಬ್ಬದ ಅಂಗವಾಗಿ ಜೋಡೊ ಯಾತ್ರೆಗೆ ಎರಡು ದಿನಗಳ ಬಿಡುವು ನೀಡಲಾಗಿತ್ತು. ಯಾತ್ರೆಯು ಮಂಡ್ಯ ಜಿಲ್ಲೆಯಲ್ಲಿ ಮುಂದುವರಿಯಲಿದ್ದು, ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಮತ್ತು ನಾಯಕರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ರಾಹುಲ್ ಸಫಾರಿ
ವಿಶ್ರಾಂತಿಯಲ್ಲಿದ್ದ ರಾಹುಲ್ ಗಾಂಧಿ ಬುಧವಾರ ಸಫಾರಿಗೆ ತೆರಳಿದ್ದರು. ಈ ವೇಳೆ ಅವರಿಗೆ ಹುಲಿ, ಆನೆ, ಕರಡಿ ಹಾಗೂ ಆನೆ ಮರಿಯ ದರ್ಶನವಾಯಿತು.
ಮರಿಯೊಂದಿಗೆ ಆನೆಯು ಇರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ರಾಹುಲ್, ಆನೆ ಮರಿಗೆ ಗಾಯವಾಗಿರುವುದನ್ನು ಗುರುತಿಸಿ ನೋವು ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.