ADVERTISEMENT

ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೆ ದೇಗುಲ ಧ್ವಂಸ: ನಂಜನಗೂಡು ತಹಶೀಲ್ದಾರ್ ವರ್ಗ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:36 IST
Last Updated 27 ಸೆಪ್ಟೆಂಬರ್ 2021, 16:36 IST
ಮೋಹನಕುಮಾರಿ
ಮೋಹನಕುಮಾರಿ   

ನಂಜನಗೂಡು: ತಾಲ್ಲೂಕಿನ ಉಚ್ಚಗಣಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗ್ರಾಮದೇವತೆ ಮಹದೇವಮ್ಮ ದೇವಾಲಯ ಧ್ವಂಸ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ, ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಅವರನ್ನು ಐಎಂಎ ವಂಚನೆ ಪ್ರಕರಣ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ನಂಜನಗೂಡು ತಹಶೀಲ್ದಾರ್ ಹುದ್ದೆಗೆ ಪ್ರಭಾರ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ತಾಲ್ಲೂಕಿನ ಉಚ್ಚಗಣಿ ಮಹದೇವಮ್ಮ ದೇಗುಲವನ್ನು ಕೆಡವಿದ ಮೇಲೆ ಧಾರ್ಮಿಕ ಭಾವನೆಗಳಿಗೆ ಭಂಗ ತಂದಿದ್ದಾರೆ ಎಂಬ ಆರೋಪಕ್ಕೆ ಮೋಹನಕುಮಾರಿ ಗುರಿಯಾಗಿದ್ದರು. ಆಡಳಿತ ಪಕ್ಷದ ಮುಖಂಡರೇ ಖಂಡಿಸಿದ್ದರಿಂದ ಮುಜುಗರಕ್ಕಿಡಾಗಿದ್ದ ಸರ್ಕಾರ ಕಾರಣ ಕೇಳಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ನೋಟಿಸ್ ಜಾರಿ ಮಾಡಿತ್ತು.

ADVERTISEMENT

ತಹಶೀಲ್ದಾರ್ ಕೂಡ ವರದಿ ನೀಡಿದ್ದರು ಎನ್ನಲಾಗಿದೆ. ಸೋಮವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಜನರ ಆಕ್ರೋಶವನ್ನು ತಹಬದಿಗೆ ತರುವಲ್ಲಿ ಸರ್ಕಾರ ಈ ಹೆಜ್ಜೆಯಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.