ADVERTISEMENT

ವಿಲಕ್ಷಣ ವ್ಯಕ್ತಿತ್ವದವರನ್ನು ಪಠ್ಯಪರಿಷ್ಕರಣೆಗೆ ನೇಮಿಸಬೇಡಿ: ನಂಜಾವಧೂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 4:44 IST
Last Updated 28 ಜೂನ್ 2022, 4:44 IST
ನಂಜಾವಧೂತ ಸ್ವಾಮೀಜಿ
ನಂಜಾವಧೂತ ಸ್ವಾಮೀಜಿ   

ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗಳಿಗೆ ವಿಲಕ್ಷಣ ವ್ಯಕ್ತಿತ್ವದವರನ್ನು ನೇಮಿಸಬಾರದು. ಪವಿತ್ರವಾದ ನಾಡ ಬಾವುಟವನ್ನು ಯಾವುದೋ ಒಂದು ವಸ್ತುವಿಗೆ (ಚಡ್ಡಿ) ಹೋಲಿಸಿದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ನೇಮಿಸಿದ್ದು ಸರಿಯಲ್ಲ ಎಂದು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆದ ಕೆಂಪೇಗೌಡ ಜಯಂತಿ ಸಮಾರಂಭದ ವೇದಿಕೆಯಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸ್ವಾಮೀಜಿ, ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿದರು.

ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಮುಂತಾದ ಮಹನೀಯರಿಗೆ ಅವಮಾನ ಹೊಸದೇನೂ ಅಲ್ಲ. ಅವೆಲ್ಲವನ್ನೂ ಮೀರಿ ಅವರು ಬೆಳೆದಿದ್ದಾರೆ. ಈಗ ಶಾಲಾ ಪಠ್ಯಪುಸ್ತಕಗಳಲ್ಲಿ ಅವಮಾನ ಆಗಿರುವುದಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ‌. ಲೋಪವನ್ನು ಸರಿಪಡಿಸಿ ಮಹನೀಯರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸರ್ಕಾರ ರೂಪಿಸಿದ ಪಠ್ಯವನ್ನು ಓದಿ, ಕಲಿತು, ಪರೀಕ್ಷೆ ಬರೆಯಬೇಕು. ತಪ್ಪು ಓದಿ, ತಪ್ಪು ಗ್ರಹಿಸಿಕೊಂಡು ಅದೇ ಸತ್ಯ ಎಂದು ಮಕ್ಕಳು ನಂಬಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಬಾರದು. ಅಂತಹ ಪಠ್ಯ ರೂಪಿಸುವವರು ಎಡ, ಬಲ ಅಥವಾ ಇನ್ನಿತರ ಸಿದ್ಧಾಂತದ ಹಿಂಬಾಲಕರು ಆಗಿರಬಾರದು. ಸಮಚಿತ್ತದಿಂದ ಎಲ್ಲವನ್ನೂ ನೋಡುವವರಾಗಿರಬೇಕು. ಆಳವಾದ ಅಧ್ಯಯನಶೀಲತೆ ಹೊಂದಿದ ವ್ಯಕ್ತಿಗಳನ್ನು ಪಠ್ಯಕ್ರಮ ರೂಪಿಸಲು ನೇಮಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.