ಬೆಂಗಳೂರು: ಸಂಸತ್ ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವರನ್ನು ಪರಿಚಯಿಸಲು ಪ್ರಧಾನಿಯವರಿಗೆ ಅವಕಾಶ ನೀಡದೆ ಕಾಂಗ್ರೆಸ್ ಅಡ್ಡಿಪಡಿಸಿದ್ದರಿಂದ ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಇದೇ 16 ರಿಂದ ರಾಜ್ಯದಲ್ಲೂ ‘ಜನಾಶೀರ್ವಾದ ಯಾತ್ರೆ’ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಟ್ಟು ನಾಲ್ಕು ತಂಡಗಳಲ್ಲಿ ಯಾತ್ರೆ ಸಂಚರಿಸಲಿದೆ ಎಂದರು.
ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರ ನೇತೃತದಲ್ಲಿ ಈ ತಂಡಗಳು ಪ್ರವಾಸ ಮಾಡಲಿವೆ. ದೇಶದಲ್ಲಿ ಒಟ್ಟು 160 ದಿನ ವಿವಿಧ ತಂಡಗಳು ಪ್ರವಾಸ ಮಾಡಲಿವೆ. ರಾಜ್ಯದಲ್ಲಿ 5 ದಿನಗಳ ಪ್ರವಾಸದಲ್ಲಿ 2,030 ಕಿ.ಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು161 ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಯಾತ್ರೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನಗೊಳಿಸಿದ ಜನಪರ ಯೋಜನೆಗಳನ್ನು ಜನರಿಗೆ ಪರಿಚಯಿಸಲಾಗುವುದು. ದೇಶದಲ್ಲಿ 55 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ಈ ಯಾತ್ರೆ ಲಸಿಕಾ ಕೇಂದ್ರಗಳು, ಪಡಿತರ ಅಂಗಡಿಗಳು, ಸಾಹಿತಿಗಳು, ಯೋಧರು, ಗಣ್ಯ ವ್ಯಕ್ತಿಗಳು, ಜನಸಂಘ ಮತ್ತು ಬಿಜೆಪಿ ಹಿರಿಯ ನಾಯಕರ ಮನೆಗಳಿಗೂ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ ಎಂದರು.
ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುವು ಎಂದೂ ಸಿದ್ದರಾಜು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.