ಬೆಂಗಳೂರು: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದುಸಾಹಿತಿ
ಪ್ರೊ. ಬರಗೂರು ರಾಮಚಂದ್ರಪ್ಪ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
‘ಹೊಸ ನೀತಿಯ ಕುರಿತು ಪರ–ವಿರೋಧ ಚರ್ಚೆಗಳು ಆರಂಭವಾಗಿದೆ. ಆದರೆ, ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಷಯದಲ್ಲಿ ಮೌನವಾಗಿದೆ. ಈ ಮೌನ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಪೂರಕ ಅಲ್ಲ’ ಎಂದು ಪತ್ರದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಸಂವಿಧಾನದ ಪ್ರಕಾರ ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಸಂಬಂಧಿ ಸಿದ್ದಾಗಿದೆ. ಈ ಹೊಸ ನೀತಿಯನ್ನು ಇತರ ಅಂಶಗಳ ಜೊತೆಗೆ ಒಕ್ಕೂಟ ವ್ಯವಸ್ಥೆಯ ನೆಲೆಯಲ್ಲೂ ಒರೆಗಲ್ಲಿಗೆ ಹಚ್ಚಬೇಕಾಗಿದೆ. ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ ಮತ್ತು ಸ್ವಾಭಿಮಾನದ ಪ್ರಶ್ನೆಯೂ ಇದರಲ್ಲಿ ಅಡಗಿದೆ. ಈ ವಿಷಯದಲ್ಲಿ ಅಧಿಕೃತ ವಿರೋಧ ಪಕ್ಷದ ನಿಲುವೇನು ಎಂದು ಪ್ರಶ್ನಿಸಬೇಕಾಗಿದೆ’ ಎಂದೂ ಅವರು ಹೇಳಿದ್ದಾರೆ.
‘ಕೆಲವು ವಿಷಯಗಳಲ್ಲಿ ದೊಡ್ಡ ದನಿಯಲ್ಲಿ ಮಾತನಾಡುವ ಕಾಂಗ್ರೆಸ್, ಶಿಕ್ಷಣ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯದಲ್ಲಿ ‘ಪಕ್ಷ ಪರಂಪರೆ’ಗೆ ಅನುಗುಣವಾಗಿ ಉಪೇಕ್ಷೆ ತೋರುತ್ತಿದೆಯೆಂದು ವಿಷಾದದಿಂದ ಹೇಳಬೇಕಾಗಿದೆ. ಈ ವಿಷಯದಲ್ಲಿ ಎಡಪಕ್ಷಗಳು ಮಾತ್ರ ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾ ಬಂದಿವೆ. ಇನ್ನಾದರೂ ಕಾಂಗ್ರೆಸ್ ಈ ವಿಷಯಗಳಿಗೆ ಆದ್ಯತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನೀತಿಯನ್ನು ಒಪ್ಪುವುದು ಅಥವಾ ಪೂರ್ಣವಾಗಿ ಒಪ್ಪದೇ ಇರುವುದು ಅಥವಾ ಕೆಲವನ್ನು ಒಪ್ಪಿ, ಕೆಲವನ್ನು ಮರುಪರಿಶೀಲನೆಗೆ ಒತ್ತಾಯಿಸುವುದು ಹೀಗೆ ಯಾವುದಾದರೂ ನಿಲುವಿಗೆ ಬರಬೇಕು’ ಎಂದೂ ಪತ್ರದಲ್ಲಿ ಬರಗೂರುಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.