ADVERTISEMENT

‘ನೈಸ್‌’ ದೌರ್ಜನ್ಯ ವಿರೋಧಿಸಿ 28ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 19:46 IST
Last Updated 25 ಜೂನ್ 2023, 19:46 IST
   

ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಬಂದ ಬಳಿಕ ರೈತರ ಮೇಲೆ ’ನೈಸ್‌’ ಕಂಪನಿಯ ದೌರ್ಜನ್ಯ ಹೆಚ್ಚಾಗಿದೆ. ಇದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಮತ್ತು ನೈಸ್ ಭೂ ಸಂತ್ರಸ್ತ ರೈತ ಹೋರಾಟ ಸಮಿತಿ ವತಿಯಿಂದ ಜೂನ್‌ 28ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಎನ್‌. ವೆಂಕಟಾಚಲಯ್ಯ ತಿಳಿಸಿದರು.

’ಕಾನೂನು ಹೋರಾಟದಲ್ಲಿ ನೈಸ್‌ ಕಂಪನಿಯ ವಿರುದ್ಧವೇ ತೀರ್ಪುಗಳು ಬಂದಿವೆ. ವಿವಿಧ ಸಮಿತಿಗಳು ಕೂಡ ರೈತರ ಪರವಾಗಿ ವರದಿ ನೀಡಿವೆ. ರೈತರಿಗೆ ಭೂಮಿ ವಾಪಸ್‌ ಮಾಡಬೇಕು. ಇಲ್ಲವೇ ಎಕರೆಗೆ ₹ 3 ಕೋಟಿಯಂತೆ ಪರಿಹಾರ ನೀಡಬೇಕು ಎಂದು ತಿಳಿಸಿವೆ. ಇತ್ತೀಚೆಗೆ ರೈತರಿಗೆ ಕಿರುಕುಳ ಆರಂಭವಾಗಿದೆ. ಗೂಂಡಾಗಳನ್ನು, ಪೊಲೀಸ್‌ ಇಲಾಖೆಯನ್ನು ಬಳಸಿಕೊಂಡು ಹಿಂಸೆ ನೀಡಲಾಗುತ್ತಿದೆ. ಅಶೋಕ್‌ ಖೇಣಿ ಅವರ ಮಿತ್ರ ಡಿ.ಕೆ. ಶಿವಕುಮಾರ್‌ ಉಪಮುಖ್ಯಮಂತ್ರಿ ಆಗಿರುವುದರಿಂದ ಈ ಬೆಳವಣಿಗೆಗಳು ನಡೆಯುತ್ತಿವೆ' ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ನೈಸ್‌ ರಸ್ತೆಯನ್ನು ಹೊರತುಪಡಿಸಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್‌ ನೀಡಬೇಕು. ರೈತರಿಗೆ ಹಿಂಸೆ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.