ಧರ್ಮಸ್ಥಳ (ದಕ್ಷಿಣ ಕನ್ನಡ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ಕೆಡಿಆರ್ಡಿಪಿ) ಮತ್ತು ಭಾರತೀಯ ಜೀವ ವಿಮಾ ನಿಗಮಗಳು ಜಂಟಿಯಾಗಿ ಎಸ್ಕೆಡಿಆರ್ಡಿಪಿ ಸದಸ್ಯರಿಗಾಗಿ ರೂಪಿಸಿರುವ 'ಪ್ರಗತಿ ರಕ್ಷಾ ಕವಚ' ವಿಮಾ ಯೋಜನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಇಲ್ಲಿ ಚಾಲನೆ ನೀಡಿದರು.
ಎಸ್ಕೆಡಿಆರ್ಡಿಪಿ ಸದಸ್ಯರು ಅಕಾಲಿಕವಾಗಿ ಮೃತಪಟ್ಟ ಸಂದರ್ಭಗಳಲ್ಲಿ ಅವರು ಪಡೆದ ಸಾಲ ಬಾಕಿ ಉಳಿಯುವುದನ್ನು ತಪ್ಪಿಸಲು ಹಾಗೂ ಮೃತರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ವಿಮಾ ಯೋಜನೆ ರೂಪಿಸಲಾಗಿದೆ. ಎಸ್ಕೆಡಿಆರ್ಡಿಪಿ ಅಡಿ ರಚಿಸಲಾಗಿರುವ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಅವರ ಪತಿ/ ಪತ್ನಿ ಸೇರಿದಂತೆ 72 ಲಕ್ಷ ಜನರನ್ನು ಈ ವಿಮಾ ಯೋಜನೆಯಡಿ ತರಲಾಗುತ್ತಿದೆ. ಸ್ವಸಹಾಯ ಗುಂಪಿನ ಸದಸ್ಯರಿಗಾಗಿ ಜಾರಿಯಾಗುತ್ತಿರುವ ಮೊದಲ ಸಾಲ ಸಹಿತ ಗುಂಪು ವಿಮಾ ಯೋಜನೆ ಇದು ಎಂದು ಎಸ್ ಕೆ ಡಿ ಆರ್ ಡಿ ಪಿ ಹೇಳಿದೆ.
ಎಎಸ್ಕೆಡಿಆರ್ಡಿಪಿ 4.47 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು, ವಾರ್ಷಿಕ ₹ 8,000 ಕೋಟಿ ಸಾಲ ನೀಡುತ್ತಿದೆ. ಒಂಬತ್ತು ವಾಣಿಜ್ಯ ಬ್ಯಾಂಕುಗಳ ನೆರವಿನಲ್ಲಿ ಈ ಕೆಲಸ ಮಾಡುತ್ತಿದೆ.
ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡುವಾಗಲೇ ಪ್ರಗತಿ ರಕ್ಷಾ ಕವಚ ಗುಂಪು ವಿಮೆಯನ್ನೂ ನೋಂದಣಿ ಮಾಡಲಾಗುತ್ತದೆ. ಸದಸ್ಯರು ಅಕಾಲಿಕವಾಗಿ ಮೃತಪಟ್ಟರೆ ವಿಮೆಯ ಮೊತ್ತದಲ್ಲಿ ಬಾಕಿ ಇರುವ ಸಾಲದ ಮೊತ್ತವನ್ನು ತುಂಬಲಾಗುತ್ತದೆ. ಉಳಿದ ಹಣವನ್ನು ಸದಸ್ಯನ ಕುಟುಂಬದವರಿಗೆ ಪಾವತಿಸಲಾಗುತ್ತದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಎಸ್.ಅಂಗಾರ, ಸಂಜೀವ ಮಠಂದೂರು, ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷ ವಿ.ಕೆ.ಶರ್ಮ, ನಿರ್ದೇಶಕರಾದ ಕದಿರೇಶನ್, ಸುಶೀಲ್ ಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.