ADVERTISEMENT

ಅಡಿಕೆಗೆ ರೋಗ: ನೆರವಿಗೆ ಚುಂಚನಗಿರಿ ಶ್ರೀ ಪತ್ರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 20:45 IST
Last Updated 28 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥಸ್ವಾಮೀಜಿ ಆಶಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸ್ವಾಮೀಜಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದ ಜೀವನಾಧಾರವಾಗಿದ್ದ ಅಡಿಕೆ, ಕಾಫಿ, ಕಾಳು ಮೆಣಸಿನ ಬೆಳೆ ನೆಲಕಚ್ಚಿದೆ. ಶೇ 90ರಷ್ಟು ಬೆಳೆಗೆ ಹಾನಿಯಾಗಿದೆ. ಅದರ ಜೊತೆಯಲ್ಲಿ ಅಡಿಕೆ ಮರಗಳಿಗೆ ಹಲವು ದಶಕಗಳಿಂದ ಬಾಧಿಸುತ್ತಿರುವ ಹಳದಿ ಎಲೆ ಚುಕ್ಕೆ ರೋಗದಿಂದ ಬೆಳೆ ನಾಶವಾಗಿದೆ. ಇದರಿಂದ ಜೀವನ ನಡೆಸಲಾಗದೆ ಅಡಿಕೆ ಬೆಳೆಗಾರರ ಕುಟುಂಬಗಳು ಕಂಗಾಲಾಗಿವೆ ಎಂದು ತಿಳಿಸಿದ್ಧಾರೆ.

ಅಡಿಕೆ ಮರಗಳಿಗೆ ಎಲೆಚುಕ್ಕೆ ರೋಗವು ವ್ಯಾಪಕವಾಗಿ ಹರಡುತ್ತಿದೆ. ಕೆಲವು ಸಣ್ಣ ಹಿಡುವಳಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಮಲೆನಾಡಿನ ರೈತರಿಗೆ ರೈತರಿಗೆ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ. ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಿದರೂ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಡ ರೈತರ ಪರಿಸ್ಥಿತಿಯನ್ನು ಅವಲೋಕಿಸಿ ಅಡಿಕೆಗೆ ತಗುಲಿರುವ ರೋಗ ನಿಯಂತ್ರಣಕ್ಕೆ ಸೂಕ್ತ ಔಷಧ ಒದಗಿಸಿಕೊಡಬೇಕು. ಜತೆಗೆ, ಆರ್ಥಿಕ ನೆರವು ಒದಗಿಸಬೇಕು ಎಂದು ಸ್ವಾಮೀಜಿ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.