ADVERTISEMENT

ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಯಾವುದೇ ಬದಲಾವಣೆಯಿಲ್ಲ: ಸ್ವಾಮೀಜಿ ಸ್ಪಷ್ಟನೆ

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 16:16 IST
Last Updated 21 ಜನವರಿ 2019, 16:16 IST
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ   

ಕೊಪ್ಪಳ: ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗವಿಮಠದ ರಥೋತ್ಸವ ಎಂದಿನಂತೆ ನಡೆಯಲಿದೆ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.

ಸೋಮವಾರ ಮಾಧ್ಯಮಗಳ ಪ್ರತಿನಿಧಿಗಳ ಎದುರು ತಾವು ಪೀಠಾಧಿಪತಿಗಳಾದ ನಂತರ ಪ್ರಥಮ ಬಾರಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಹಿಮಾಲಯ ಸದೃಶ್ಯ ವ್ಯಕ್ತಿತ್ವವುಳ್ಳವರು. ಬಡವ ಶ್ರೀಮಂತ ಎಂಬ ಬೇಧವಿಲ್ಲದೆ. ತಮ್ಮ ಹತ್ತಿರ ಬಂದ ಯಾವುದೇ ವ್ಯಕ್ತಿಯನ್ನು ಅದೇ ಪ್ರೀತಿಯಿಂದ ಮಾತನಾಡಿಸುವ ಅಂತಃಕರಣವನ್ನು ಹೊಂದಿದ ಮಹಾನ್ ಯೋಗಿ ಎಂದು ಭಾವುಕವಾಗಿ ಹೇಳಿದರು.

ಶರಣರನ್ನು ಮರಣದಲ್ಲಿ ನೋಡು ಎಂಬಂತೆ ಸ್ವಾಮೀಜಿ 112 ವರ್ಷಗಳ ಕಾಲ ಬದುಕಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದು ಸರಿ ಎನಿಸುವುದಿಲ್ಲ. ಸಿದ್ಧಗಂಗೆ ಶ್ರೀಗಳ ಅಂತಃಕರಣ ಎಲ್ಲರಲ್ಲಿ ನೆಲೆಸಲಿ. ಅಂತಹ ಮಹಾತ್ಮ ಇದೇ ನೆಲದಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಹೇಳಿದರು.

ADVERTISEMENT

ಶಿವಕುಮಾರ ಸ್ವಾಮೀಜಿಗಳ ಜೊತೆ ನಮ್ಮ ಒಡನಾಟ ಅತ್ಯಂತ ಪರಮಾಪ್ತವಾಗಿತ್ತು. ಅವರ 111ನೇ ಜನ್ಮದಿನಕ್ಕೆ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದರು. ಅಂತಹ ಮಹಾಮಹೀಮರ ನೇತೃತ್ವದಲ್ಲಿ 2 ಸಾವಿರ ವಿದ್ಯಾರ್ಥಿಗಳ ದಾಸೋಹ ಭವನಕ್ಕೆ 2006ರಲ್ಲಿ ಶಿಲಾನ್ಯಾಸ ನೆರೆವೇರಿಸಿ ಒಂದೇ ವರ್ಷದಲ್ಲಿ ಉದ್ಘಾಟನೆಯಾಗಿದ್ದು, ಶ್ರೀಗಳ ಕೃಪೆಯಾಗಿತ್ತು ಎಂದು ಹೇಳಿದರು.

ಸಿದ್ಧಗಂಗಾ ಸ್ವಾಮೀಜಿಗಳ ಪರಮಾಪ್ತ ಬಳಗದಲ್ಲಿ ಗವಿಮಠದ ಶ್ರೀಗಳು ಅವರ ಮಾರ್ಗದರ್ಶನದಲ್ಲಿಯೇ ಎಲ್ಲ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಮಂಗಳವಾರ ನಡೆಯಲಿರುವ ಮಹಾರಥೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೋ, ಇಲ್ಲವೋ ಎಂಬ ಗೊಂದಲ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗವಿಮಠದ ಶ್ರೀಗಳು ಜಾತ್ರೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಯಿಲ್ಲ. ಗುರುಗಳನ್ನು ಸ್ಮರಣೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.