ADVERTISEMENT

ಸೋನಿಯಾ ಗಾಂಧಿ ಭೇಟಿ; ರಾಷ್ಟ್ರ ರಾಜಕಾರಣದ ಚರ್ಚೆಯೇ ಬಂದಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 16:37 IST
Last Updated 11 ಅಕ್ಟೋಬರ್ 2021, 16:37 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇತ್ತೀಚೆಗೆ ಭೇಟಿಮಾಡಿದ್ದ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣಕ್ಕೆ ತೆರಳುವ ವಿಷಯ ಚರ್ಚೆಗೇ ಬಂದಿಲ್ಲ. ರಾಷ್ಟ್ರ ರಾಜಕೀಯಕ್ಕೆ ಬರಬೇಕೆಂಬ ಆಹ್ವಾನ ತಿರಸ್ಕರಿಸಿದ್ದೇನೆ ಎಂಬ ವರದಿಗಳಲ್ಲಿ ಸತ್ಯಾಂಶವಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ನನಗೆ ಆಹ್ವಾನವನ್ನು ನೀಡಿಯೇ ಇಲ್ಲ. ಆ ಕುರಿತು ಪ್ರಸ್ತಾಪವೂ ಆಗಿಲ್ಲ. ಆದರೂ, ಆಹ್ವಾನವನ್ನು ತಿರಸ್ಕರಿಸಿರುವುದರಿಂದ ಸೋನಿಯಾ ಅವರಿಗೆ ಬೇಸರವಾಗಿದೆ ಎಂದರೆ ಏನು ಉತ್ತರ ಹೇಳುವುದು’ ಎಂದು ಕೇಳಿದರು.

ಚರ್ಚೆಯಾಗಿದ್ದರೆ ತಾನೇ ಮನಸ್ತಾಪ ಆಗುವುದು? ಸ್ಪಷ್ಟವಾಗಿ ಹೇಳಿದ ಬಳಿಕವೂ ಕಲ್ಪಿತ ವರದಿಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಎಂಬುದನ್ನು ದೀರ್ಘ ಕಾಲದಿಂದ ಹೇಳುತ್ತಾ ಬಂದಿದ್ದೇನೆ. ಈಗಲೂ ಆದಷ್ಟು ಬೇಗ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಸೋನಿಯಾ ಅವರ ಬಳಿ ಹೇಳಿದ್ದೇನೆ’ ಎಂದರು.

ರಾಷ್ಟ್ರ ರಾಜಕಾರಣದಲ್ಲಿ ತಮಗೆ ಆಸಕ್ತಿ ಇಲ್ಲ. ಪ್ರಧಾನಿಯಾಗುವ ಕನಸನ್ನು ಎಂದೂ ಕಂಡಿಲ್ಲ. ರಾಹುಲ್‌ ಗಾಂಧಿಯೇ ನಮ್ಮ ನಾಯಕ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.