ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುವ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮುಂದಿನ ವರ್ಷದಿಂದ ಶಾಶ್ವತವಾಗಿ ರದ್ದಾಗುವ ಸಾಧ್ಯತೆ ಇದೆ.
‘ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಉಚಿತ ಲ್ಯಾಪ್ಟಾಪ್ಗೆ ಸುಮಾರು ₹ 280 ಕೋಟಿಯನ್ನು ಪ್ರತ್ಯೇಕವಾಗಿ ತೆಗೆದಿರಿಸಬೇಕಾಗುತ್ತದೆ. ಇದಕ್ಕೆ ಹಣಕಾಸು ಇಲಾಖೆಯ ತೀವ್ರ ಆಕ್ಷೇಪ ಇದೆ. ಹೀಗಾಗಿ ಮುಂದಿನ ವರ್ಷದಿಂದ ಯೋಜನೆ ಕೈಬಿಡುವ ಸ್ಥಿತಿ ಬರಬಹುದು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
‘ಕಳೆದ ವರ್ಷವೇ ತೀವ್ರ ಆಕ್ಷೇಪ ಇತ್ತು. ಆದರೂ ಎರಡು ವರ್ಷದಿಂದ ಸ್ಥಗಿತವಾಗಿದ್ದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. 1.09 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಈ ಬಾರಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿರುವುದರಿಂದ 2020–21ನೇ ಸಾಲಿಗೆ ಹಣಕಾಸು ಇಲಾಖೆಗೆ ಪ್ರಸ್ತಾವವನ್ನೇ ಸಲ್ಲಿಸಿಲ್ಲ’ ಎಂದು ಮೂಲಗಳು ಹೇಳಿವೆ.
ಹೆಚ್ಚುತ್ತಿರುವ ವೆಚ್ಚವೂ ಕಾರಣ
2016–17ರಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗಿತ್ತು. ಆಗ ಅದರ ಬೆಲೆ ₹ 14,500 ಇತ್ತು. ಇಂದು ಅದರ ಬೆಲೆ ₹ 28 ಸಾವಿರಕ್ಕೆ ಹೆಚ್ಚಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ನೀಡುವ ಯೋಜನೆ ಭಾರಿ ವಿವಾದ ಎಬ್ಬಿಸಿದ್ದರಿಂದ ಅದನ್ನು ಇತರರಿಗೂ ವಿತರಿಸಲು ನಿರ್ಧರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.