ಬೆಂಗಳೂರು: ಆನ್ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗೆ ಮುನ್ನ ಸಚಿವರು ಮಂಗಳವಾರ ಮದ್ಯ ಮಾರಾಟಗಾರರ ಜತೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ‘ಹೊಸದಾಗಿ ಮದ್ಯ ಮಾರಾಟಕ್ಕೆ ಸನ್ನದು ನೀಡುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಅಬಕಾರಿ ಆದಾಯದ ಸೋರಿಕೆ ಮತ್ತು ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಅಬಕಾರಿ ಉಪನಿರೀಕ್ಷಕರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ತೀರ್ಮಾನಿಸಿದ್ದು. 350 ದ್ವಿಚಕ್ರ ವಾಹನ ಖರೀದಿಸಲಾಗುವುದು. ಜಿಲ್ಲಾ ಅಬಕಾರಿ ಕಚೇರಿಗಳಿಗೆ ತಲಾ ನಾಲ್ಕು ಪಿಸ್ತೂಲ್ಗಳನ್ನು ನೀಡಲು ತೀರ್ಮಾನಿಸಲಾಗಿದೆ’ ಎಂದು ಗೋಪಾಲಯ್ಯ ಹೇಳಿದರು.
ಅಬಕಾರಿ ಇಲಾಖೆ ಮುಂದಿನ ಆರ್ಥಿಕ ವರ್ಷ ಹೆಚ್ಚು ಆದಾಯ ಸಂಗ್ರಹಕ್ಕೆ ಗುರಿ ನಿಗದಿ ಮಾಡಲಿದೆ. ಈ ವರ್ಷ ₹22,700 ಕೋಟಿ ನಿಗದಿ ಮಾಡಲಾಗಿತ್ತು. ಈವರೆಗೆ ₹19,433 ಕೋಟಿ ಸಂಗ್ರಹವಾಗಿದೆ. ಬಾಕಿ ಮೊತ್ತವನ್ನು ಬಜೆಟ್ ಒಳಗೆ ಸಂಗ್ರಹಿಸಲಾಗುವುದು. ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಹಿಂದಿನ ಸಾಲಿಗಿಂತ ಈ ಸಾಲಿನಲ್ಲಿ ಶೇ 4.4 ರಷ್ಟು ಪ್ರಗತಿ ಆಗಿದೆ ಎಂದರು.
ಇಂದಿನ ಸಭೆಯಲ್ಲಿ ಮದ್ಯ ಮಾರಾಟಗಾರರು ಹಲವು ಬೇಡಿಕೆ ಗಳು ಮತ್ತು ಸಮಸ್ಯೆಗಳ ಕುರಿತು ಮಾತನಾಡಿದರು. ಮುಖ್ಯವಾಗಿ ಕಮಿಷನ್ ಅನ್ನು ಶೇ 20 ರಿಂದ ಶೇ 25 ಕ್ಕೆ ಏರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಇವೆಲ್ಲವನ್ನೂ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.