ಬೆಂಗಳೂರು: ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಕಾರ್ಯಕ್ರಮದಲ್ಲಿ ಅವಕಾಶ ಒದಗಿಸುವುದು ಮತ್ತು ಅದಕ್ಕೆ ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ರಾಜೀವ ತಾರಾನಾಥ್ ಅವರ ಬಳಿ ಹಣ ಕೇಳಿದ್ದಾರೆ ಎಂದು ವರದಿಯಾಗಿತ್ತು. ಈ ಕುರಿತಂತೆ ತನಿಖೆ ನಡೆಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಹೇಳಿದ್ದರು.
ಶನಿವಾರ ತಮ್ಮ ಮನೆಗೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾತನಾಡಿದ ಪಂ. ತಾರಾನಾಥ ಅವರು, ‘ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ. ಅದೊಂದು ತಪ್ಪು ಹೇಳಿಕೆ. ಸಮಿತಿ ಕಡೆಯಿಂದಲೂ ಯಾರೂ ಬಂದಿಲ್ಲ’ ಎಂದಿದ್ದಾರೆ.
ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿಂದೆ ಜಿಲ್ಲಾಡಳಿತ ಕೋರಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ನಿಮ್ಮ ಆರೋಗ್ಯ ಉತ್ತಮವಾಗಿದ್ದು, ಕಾರ್ಯಕ್ರಮ ನೀಡುತ್ತೀರಾ ಎಂಬ ಅಧಿಕಾರಿಗಳ ಕೋರಿಕೆಗೆ ಸಮ್ಮತಿಸಿದ ಪಂ. ತಾರಾನಾಥ, ‘ಬಂದು ಡಾನ್ಸ್ ಮಾಡುತ್ತೇನೆ’ ಎಂದು ನಗೆ ಚಟಾಕಿ ಹಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.