ADVERTISEMENT

ಗದಗ ಜಿಲ್ಲೆಗೆ ಬೀಜದ ಪಾರ್ಸೆಲ್‌ ಬಂದಿಲ್ಲ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 12:57 IST
Last Updated 27 ಆಗಸ್ಟ್ 2020, 12:57 IST

ಗದಗ: ‘ಬಿತ್ತನೆ ಬೀಜ ಇರುವ ಪೊಟ್ಟಣಗಳ ಪಾರ್ಸೆಲ್‌ ಜಿಲ್ಲೆಯ ಯಾವ ರೈತರಿಗೂ ಬಂದಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ನಮ್ಮ ರಾಜ್ಯಕ್ಕೆ ಬಂದಿರುವುದು ಕೂಡ ಅನುಮಾನ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಹೇಳಿದರು.

‘ಅನಾಮಧೇಯ ಮೂಲಗಳಿಂದ ಅಮೆರಿಕ, ಬ್ರಿಟನ್‌, ಜಪಾನ್‌ ಮೊದಲಾದ ದೇಶಗಳಿಗೆ ಬೀಜಗಳ ಪಾರ್ಸೆಲ್‌ ಬಂದಿವೆಯಂತೆ. ನಮ್ಮ ದೇಶಕ್ಕೂ ಬರುವ ಸಾಧ್ಯತೆ ಇದ್ದು, ಬಿತ್ತನೆ ಬೀಜದ ಪಾರ್ಸೆಲ್‌ ಬಂದರೆ ತಕ್ಷಣ ಮಾಹಿತಿ ಕೊಡಿ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸಂದೇಶ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ನಾವು ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿ, ರೈತರಿಗೆ ಮಾಹಿತಿ ದಾಟಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದರು.

‘ಅನಾಮಧೇಯ ಮೂಲಗಳಿಂದ ಬರುವ ಬಿತ್ತನೆ ಬೀಜಗಳಲ್ಲಿ ಏನಿರುತ್ತದೆಯೋ ಗೊತ್ತಿಲ್ಲ. ರೋಗಕಾರಕಗಳು, ಕೃಷಿ ಅಥವಾ ದೇಶದ ಆಹಾರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಯಾವುದಾದರೂ ಅಂಶ ಇರಬಹುದು ಎಂಬ ಅನುಮಾನವನ್ನು ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ. ಹಾಗಾಗಿ, ಎಲ್ಲ ರೈತರಿಗೂ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ 80 ಸಾವಿರದಷ್ಟು ರೈತರ ಮೊಬೈಲ್‌ ನಂಬರ್‌ಗಳು ಲಭ್ಯವಿದ್ದು, ಅವರಿಗೆ ಸಾಮೂಹಿಕವಾಗಿ ಜಾಗೃತಿ ಸಂದೇಶ ಕಳುಹಿಸಲಾಗುವುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.