ADVERTISEMENT

ಅಸಮರ್ಥ ಆಡಳಿತ ವ್ಯವಸ್ಥೆ: ನಷ್ಟದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ

ಬಸವರಾಜ ಸಂಪಳ್ಳಿ
Published 20 ಜುಲೈ 2019, 20:14 IST
Last Updated 20 ಜುಲೈ 2019, 20:14 IST
   

ಹುಬ್ಬಳ್ಳಿ: ಮುಂಬೈ ಕರ್ನಾಟಕ ವ್ಯಾಪ್ತಿಯ 4,519 ಹಳ್ಳಿಗಳನ್ನು ರಾಜ್ಯ, ಹೊರ ರಾಜ್ಯದ ಪ್ರಮುಖ ನಗರ, ಪಟ್ಟಣಗಳೊಂದಿಗೆ ಬೆಸೆದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಭಾಗದ ಜನಪ್ರಿಯ ಸಾರಿಗೆ. ಆದರೆ, ಭ್ರಷ್ಟ ಮತ್ತು ಅಸಮರ್ಥ ಆಡಳಿತ ವ್ಯವಸ್ಥೆಯಿಂದಾಗಿ ಸಂಸ್ಥೆ ನಷ್ಟದ ಹಾದಿಯಲ್ಲಿ ಇದೆ.

ಬಸ್ಸುಗಳ ಖರೀದಿ, ಸಿಬ್ಬಂದಿ ನೇಮಕ, ವರ್ಗಾವಣೆ ವಿಷಯದಲ್ಲಿ ಒಂದಲ್ಲ ಒಂದು ಹಗರಣ, ಭ್ರಷ್ಟಾಚಾರ ನಡೆಯುತ್ತಲೇ ಇದೆ. ಸಂಸ್ಥೆಯಲ್ಲಿ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ವ್ಯಾಪಿಸಿದೆ ಎಂದರೆ ಚಾಲಕರು, ನಿರ್ವಾಹಕರು ತಮ್ಮ ಹಕ್ಕುಬದ್ಧ ರಜೆ ಪಡೆಯಲು ಕೂಡ ಮೇಲಧಿಕಾರಿಗಳಿಗೆ ಲಂಚ ನೀಡಬೇಕಾದ ಸ್ಥಿತಿ ಇದೆ!

ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ವಸ್ತುಗಳ ಹಗರಣ ಮತ್ತು ಹಳೇ ಬಸ್‌ಗಳ ಚಾಸ್ಸಿ ನಂಬರ್‌ ಗಳನ್ನು ಹೊಸ ಬಸ್‌ಗಳಿಗೆ ಹಾಕಿ ಗುಜರಿಗೆ ಕಳುಹಿಸುವ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಗಳು 2015ರಲ್ಲಿ ಬೆಳಕಿಗೆ ಬಂದಿದ್ದವು.

ಸಾರಿಗೆ ಸಂಸ್ಥೆಗಳಲ್ಲಿ ಸಾಮಾನ್ಯ ವಾಗಿ 8 ಲಕ್ಷ ಕಿ.ಮೀ ದೂರ ಕ್ರಮಿ ಸಿದ ವಾಹನಗಳನ್ನು ಗುಜರಿಗೆ ಹಾಕಲಾ ಗುತ್ತದೆ. ಆದರೆ, ಅವಧಿ ಮೀರಿದ ಬಸ್‌ಗಳ ಚಾಸ್ಸಿ ಸಂಖ್ಯೆಯನ್ನು ಕಡಿಮೆ ದೂರ ಕ್ರಮಿಸಿದ 14 ಬಸ್‌ಗಳಿಗೆ ಹಾಕಿ ಗುಜರಿಗೆ ಮಾರಾಟ ಮಾಡಿದ್ದ ಪ್ರಕರಣ ಬಾಗಲಕೋಟೆ ವಿಭಾಗದಲ್ಲಿ ನಡೆದಿತ್ತು.

ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಗುಜರಿ ವಸ್ತುಗಳ ಮಾರಾಟದಲ್ಲಿ ₹2.80 ಕೋಟಿ ದುರುಪಯೋಗವಾಗಿತ್ತು. ಈ ಸಂಬಂಧ ನಾಲ್ಕು ಮಂದಿ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇದರ ಬಳಿಕ ಎಂಎಸ್‌ಟಿಸಿ (ಮೆಟಲ್‌ ಆ್ಯಂಡ್‌ ಸ್ಟೀಲ್‌ ಟ್ರೇಡಿಂಗ್‌ ಕಾರ್ಪೊರೇಷನ್‌) ಮೂಲಕ ಆನ್‌ಲೈನ್‌ ಟೆಂಡರ್‌ ಆಹ್ವಾನಿಸಿ, ಗುಜರಿ ವಸ್ತುಗಳನ್ನು ಹರಾಜು ಮಾಡುವ ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ ಎನ್ನುತ್ತಾರೆ ಈ ಹಗರಣವನ್ನು ಬಯಲಿಗೆಳೆದು, ಹೋರಾಟ ನಡೆಸಿದ್ದ ಬಿಎಂಎಸ್‌ ಕಾರ್ಮಿಕ ಮುಖಂಡ ಸುಭಾಶ ಸಿಂಗ್‌ ಜಮಾದಾರ್‌.

*
ಪ್ರಯಾಣಿಕರ ಸಾಗಾಟದ ಜತೆಗೆ ಸರಕು– ಸಾಗಾಟ ವ್ಯವಸ್ಥೆ ಆರಂಭಿಸುವಂತೆ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವ ಸಲ್ಲಿಸಿದ್ದರೂ ಇದುವರೆಗೂ ಜಾರಿಯಾಗಿಲ್ಲ.
-ಡಾ.ಕೆ.ಎಸ್‌.ಶರ್ಮಾ, ಅಧ್ಯಕ್ಷ, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ, ಹುಬ್ಬಳ್ಳಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.