ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ ಅವಹೇಳನಕಾರಿ ಮಾಹಿತಿಯನ್ನು ಅಪ್ಲೋಡ್ ಮಾಡಿದ ಆರೋಪದ ಮೇಲೆಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಸ್.ಮಣಿ ಸಹಿತ ನಾಲ್ವರನ್ನು ಅಮಾನತು ಮಾಡಲಾಗಿದೆ.
ಈ ವಿಚಾರ ದೊಡ್ಡ ವಿವಾದವಾಗಿ ಪರಿಣಮಿಸಿದ್ದು, ನಾಲ್ವರು ಅಧಿಕಾರಿಗಳ ’ತಲೆದಂಡ’ಕ್ಕೆ ಕಾರಣವಾಗಿದೆ.ಅಮಾನತುಗೊಂಡವರಲ್ಲಿ ಒಬ್ಬರು ಉಪನಿರ್ದೆಶಕರು,ಅಧೀಕ್ಷಕ ಮತ್ತು ಗುಮಾಸ್ತ ಸೇರಿದ್ದಾರೆ.
ಸಿಎಂಸಿಎ ಸ್ವಯಂಸೇವಾ ಸಂಸ್ಥೆ ಅಂಬೇಡ್ಕರ್ ಅವರ ಬಗ್ಗೆ ನೀಡಿದ್ದ ಮಾಹಿತಿಯನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಹಾಕಲಾಗಿತ್ತು. ಈ ಕುರಿತಂತೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆಯಲಾಗಿತ್ತು.
ಕೈಪಿಡಿಯ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಬೇಕು.ಅವರು ನೀಡುವ ಶಿಫಾರಸಿನಂತೆ ಸುತ್ತೋಲೆಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದುಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಕ್ಟೋಬರ್ ಮೊದಲ ವಾರದಲ್ಲೇ ಲಿಖಿತ ಸೂಚನೆ ನೀಡಿದ್ದರು.
ಆದರೆ ಈ ಸೂಚನೆಯನ್ನು ಮರೆತ ಕೆಳಹಂತದ ಅಧಿಕಾರಿಗಳು ಸುತ್ತೋಲೆ ಅಪ್ಲೋಡ್ ಮಾಡಿದ್ದು ವಿವಾದ ಸೃಷ್ಟಿಸಿತು.
‘ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ತಕ್ಷಣ ವೆಬ್ಸೈಟ್ನಿಂದ ಈ ಸುತ್ತೋಲೆ ಹಿಂಪಡೆಯಲು ಸೂಚಿಸಿದೆ. ತನಿಖೆಗೂ ಆದೇಶಿಸಿದೆ. ತಪ್ಪು ಎಸಗಿದವರು ಯಾರೆಂಬುದು ಗೊತ್ತಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.