ADVERTISEMENT

ಸಚಿವರ ಬದಲು ಪಿ.ಎ ಪತ್ರ: ಸಭಾಪತಿ ಹೊರಟ್ಟಿ ಗರಂ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 16:10 IST
Last Updated 5 ಮಾರ್ಚ್ 2021, 16:10 IST
ಸಚಿವ ಆನಂದ್‌ ಸಿಂಗ್
ಸಚಿವ ಆನಂದ್‌ ಸಿಂಗ್   

ಬೆಂಗಳೂರು: ವಿಧಾನ ಪರಿಷತ್ ಅಧಿವೇಶನಕ್ಕೆ ಶುಕ್ರವಾರ ಗೈರಾಗುವ ಕುರಿತು ಸಚಿವ ಆನಂದ್‌ ಸಿಂಗ್‌ ಪರವಾಗಿ ಅವರ ಆಪ್ತ ಸಹಾಯಕ ಪತ್ರ ಬರೆದು ಮಾಹಿತಿ ನೀಡಿರುವುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಿಗ್ಗೆ ಸದನದ ಕಲಾಪ ಆರಂಭವಾದಾಗ ಬಹುತೇಕ ಸಚಿವರು ಸದನಕ್ಕೆ ಬಂದಿರಲಿಲ್ಲ. ಅಧಿಕಾರಿಗಳ ಗ್ಯಾಲರಿಯೂ ಖಾಲಿ ಇತ್ತು. ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್‌. ಪಾಟೀಲ, ‘ಸಚಿವರೂ ಇಲ್ಲ, ಅಧಿಕಾರಿಗಳೂ ಇಲ್ಲ. ಯಾರಿಗಾಗಿ ಸದನ ನಡೆಸಬೇಕು? ಸರ್ಕಾರ ಕಲಾಪವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಆಕ್ಷೇಪಿಸಿದರು.

ಹೆಚ್ಚಿನ ಸಚಿವರು ವಿಧಾನಸಭೆಯಲ್ಲಿ ಇದ್ದಾರೆ ಎಂದು ಸಮಜಾಯಿಷಿ ನೀಡಲು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಯತ್ನಿಸಿದರು. ವಿರೋಧ ಪಕ್ಷದ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಮಧ್ಯ ಪ್ರವೇಶಿಸಿದ ಸಭಾಪತಿ ಹೊರಟ್ಟಿ, ‘ಸಚಿವ ಆನಂದ್‌ ಸಿಂಗ್‌ ಅವರು ಪೂರ್ವ ನಿಯೋಜಿತ ಕಾರ್ಯಕ್ರಮಗಳ ಕಾರಣದಿಂದ ಸದನಕ್ಕೆ ಗೈರಾಗುತ್ತಾರೆ ಎಂದು ಅವರ ಆಪ್ತ ಸಹಾಯಕ ಪತ್ರ ಬರೆದಿದ್ದಾರೆ. ಸಭಾಪತಿಗೆ ಸಚಿವರೇ ಪತ್ರದ ಮೂಲಕ ಮಾಹಿತಿ ನೀಡುವುದು ಕ್ರಮ. ರಮೇಶ್‌ ಬಾಬು ಎಂಬ ಆಪ್ತ ಸಹಾಯಕನ ಹೆಸರಿನಲ್ಲಿ ಪತ್ರ ಬಂದಿದೆ. ನಾನು ಪತ್ರ ನೋಡಿದ ತಕ್ಷಣ ರಮೇಶ್‌ ಬಾಬು ಎಂಬ ಹೊಸ ಸಚಿವರು ಇರಬಹುದು ಅಂದುಕೊಂಡೆ’ ಎಂದು ವ್ಯಂಗ್ಯವಾಗಿಯೇ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.