ADVERTISEMENT

Pahalgam Terror Attack: ಪೊಲೀಸ್‌ ಗೌರವದೊಂದಿಗೆ ಭರತ್ ಭೂಷಣ್‌ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 15:50 IST
Last Updated 24 ಏಪ್ರಿಲ್ 2025, 15:50 IST
<div class="paragraphs"><p>ಭರತ್ ಭೂಷಣ್‌ ಅವರ ಕುಟುಂಬದವರಿಗೆ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿದರು</p></div>

ಭರತ್ ಭೂಷಣ್‌ ಅವರ ಕುಟುಂಬದವರಿಗೆ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿದರು

   

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ನಗರದ ಭರತ್ ಭೂಷಣ್ ಅವರ ಅಂತ್ಯಕ್ರಿಯೆಯು ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ನಡೆಯಿತು.

ಮೃತ ಭರತ್ ಭೂಷಣ್‌, ಮಂಜುನಾಥ ರಾವ್ ಅವರ ಶರೀರಗಳು ಹಾಗೂ ಕುಟುಂಬದವರು ಇದ್ದ ವಿಮಾನವು ಮುಂಜಾನೆ 3.50ರ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಬೆಳಿಗ್ಗೆ 6.30ರ ವೇಳೆಗೆ ಭರತ್ ಅವರ ಶರೀರವನ್ನು ಜಾಲಹಳ್ಳಿ ಸಮೀಪದ ಸುಂದರನಗರ ನಿವಾಸಕ್ಕೆ ಆಂಬುಲೆನ್ಸ್‌ನಲ್ಲಿ ತರಲಾಯಿತು.

ADVERTISEMENT

ಮನೆಯ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದವರು, ಸ್ನೇಹಿತರು ಮತ್ತು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆ 7.30ರ ಸುಮಾರಿಗೆ ಅಲ್ಲಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತರಿಗೆ ಪುಷ್ಪನಮನ ಸಲ್ಲಿಸಿದರು. ಮೃತರ ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಮಾತನಾಡಿ, ಸಾಂತ್ವನ ಹೇಳಿದರು. ಜತೆಗೆ ಪೊಲೀಸ್‌ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿ, ಅಂತಿಮ ದರ್ಶನದ ವ್ಯವಸ್ಥೆಗಳನ್ನು ಪರಿಶೀಲಿಸಿದರು. 

ಭರತ್ ಅವರ ಶರೀರವನ್ನು ಮಧ್ಯಾಹ್ನ ವಿಶೇಷ ವಾಹನದಲ್ಲಿ ಹೆಬ್ಬಾಳದ ವಿದ್ಯುತ್ ಚಿತಾಗಾರಕ್ಕೆ ತರಲಾಯಿತು. ಅಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ, ಗೌರವ ಸಲ್ಲಿಸಿದರು. ನಂತರ ವಿಧಿ–ವಿಧಾನಗಳನ್ನು ಪೂರೈಸಿ, ಸಂಜೆ 4ರ ವೇಳೆಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

‘ಓಡೋಡಿ ಜೀವ ಉಳಿಸಿಕೊಂಡೆವು’

ಬೈಸರನ್‌ ಕಣಿವೆಯ ಕಲ್ಲುಬೆಂಚಿನ ಮೇಲೆ ಕುಳಿತಿದ್ದಾಗ ಉಗ್ರರು ನಮ್ಮೆದುರು ಬಂದರು. ನಾನು ಮತ್ತು ಭರತ್ ನಮ್ಮ ಮಗನನ್ನು ಬಚ್ಚಿಟ್ಟುಕೊಂಡೆವು. ಅವರು ‘ವೋ ಬಚ್ಚಾ ಹೇ ಉಸ್ಕೊ ನಹೀ ಮಾರೇಂಗೆ’ ಎಂದು ಮಾತನಾಡಿಕೊಂಡರು. ಭರತ್‌ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿ ಹೋದರು. ನಮ್ಮವರು ಕುಸಿದುಬಿದ್ದರು. ನನ್ನ ಮಗುವನ್ನು ಎಲ್ಲಿ ಕೊಂದುಬಿಡುತ್ತಾರೋ ಎಂಬ ಭಯದಲ್ಲಿ ಅವನನ್ನು ಎದೆಗವಚಿಕೊಂಡು ಅಲ್ಲಿಂದ ಓಡಿದೆ. ಕಣಿವೆ ಇಳಿದು ಓಡಿ ಬರುವಾಗಲೂ ಹಿಂದೆ ಗುಂಡಿನ ಶಬ್ದ ಕೇಳುತ್ತಲೇ ಇತ್ತು. ಡಾ.ಸುಜಾತ ಮೃತ ಭರತ್ ಭೂಷಣ್ ಅವರ ಪತ್ನಿ

‘ಅಮಾಯಕರ ಹತ್ಯೆ ಹೇಯಕೃತ್ಯ’

‘ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ತಮ್ಮ ಕುಟುಂಬದವರ ಎದುರು ಕೊಲ್ಲುವುದು ಹೇಯಕೃತ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕಾಶ್ಮೀರದಲ್ಲಿ ಈಚಿನ ವರ್ಷಗಳಲ್ಲಿ ಪುಲ್ವಾಮಾ ಬಾಲಾಕೋಟ್ ದಾಳಿಗಳು ನಡೆದಿದ್ದವು. ಅಂತಹ ದಾಳಿ ಮರುಕಳಿಸಿದೆ. ಇದಕ್ಕೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವೂ ಕಾರಣ ಇರಬಹುದು. ಈ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.