ADVERTISEMENT

ಆಂತರಿಕ ಕಲಹದಿಂದ ಪಕ್ಷ ಹೈರಾಣ: ಡಿ.ವಿ.ಸದಾನಂದಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 15:29 IST
Last Updated 10 ಫೆಬ್ರುವರಿ 2025, 15:29 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಬೆಂಗಳೂರು: ದೆಹಲಿಯಲ್ಲಿ ಪಕ್ಷದ ಒಗ್ಗಟ್ಟು, ನಿಷ್ಠೆ, ಕಾರ್ಯತತ್ಪರತೆಯಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಇನ್ನೂ ಆಂತರಿಕ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಪಕ್ಷ ಬಳಲುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

‘ದೆಹಲಿಯ ಗೆಲುವು ನಮಗೆ ಪಾಠವಾಗಬೇಕು. ಒಳ ಜಗಳ ಮುಗಿದು, ಕಾರ್ಯಪದ್ಧತಿಯಲ್ಲಿ ಸ್ಪಷ್ಟತೆ ಮತ್ತು ಶಿಸ್ತು ಬರಬೇಕು. ಕರ್ನಾಟಕದ ಜನತೆ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಆದರೆ ಅವರ ವಿಶ್ವಾಸ ಗಳಿಸಲು ಪಕ್ಷದ ಒಳಾಂಗಣವನ್ನು ಶುದ್ಧಗೊಳಿಸಿ, ಬಲಿಷ್ಠಗೊಳಿಸಬೇಕಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳು ಮತ್ತು ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ದೆಹಲಿಯಲ್ಲಿ ಪಕ್ಷದ ನಾಯಕರು ಏಕತೆ ಮತ್ತು ಶಿಸ್ತನ್ನು ಅನುಸರಿಸಿದರೆ, ಕರ್ನಾಟಕದ ಕೆಲವು ನಾಯಕರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಒಡಕು ಹುಟ್ಟಿಸಿರುವುದರಿಂದ ಸಮಸ್ಯೆ ಗಂಭೀರವಾಗಿದೆ. ಇದರಿಂದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಅಸ್ಥಿರತೆ ಉಂಟಾಗಿದೆ. ಇದನ್ನು ಸರಿಪಡಿಸದೇ ಇದ್ದರೆ, ಮುಂಬರುವ ಚುನಾವಣೆಯಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ’ ಎಂದು  ಹೇಳಿದ್ದಾರೆ.

ADVERTISEMENT

‘ಪಕ್ಷದ ಯಶಸ್ಸು ಯಾವುದೇ ಒಬ್ಬ ವ್ಯಕ್ತಿಯ ಸಾಧನೆ ಅಲ್ಲ. ಇದು ಶ್ರದ್ಧೆ, ಶ್ರಮ ಮತ್ತು ಸಮೂಹ ಶಕ್ತಿಯ ಪ್ರತೀಕ. ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಬೇಕಾದರೆ ಎಲ್ಲಾ ನಾಯಕರು ಒಗ್ಗೂಡಬೇಕು. ಸಂಘಟನಾ ಶಕ್ತಿಯನ್ನು ಪುನರ್‌ ನಿರ್ಮಿಸಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.