ಮಂಡ್ಯ/ಬೆಂಗಳೂರು: ಗುಜರಾತ್ನ ‘ಅಮುಲ್’ ಜತೆಗೆ ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್ –ನಂದಿನಿ) ಒಂದುಗೂಡಿಸುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ‘ವಿಲೀನ‘ ಪ್ರಸ್ತಾವವನ್ನು ಬಹುತೇಕ ಮಂದಿ ಖಂಡಿಸಿದ್ದು, ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟದ (ಮನ್ ಮುಲ್) ಆವರಣದಲ್ಲಿ ಮೆಗಾ ಡೇರಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದ್ದ ಶಾ, ‘1975ರಿಂದಲೂ ಕೆಎಂಎಫ್ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಗುಜರಾತ್ ಸಹಕಾರ ಒಕ್ಕೂಟವೂ ಪ್ರಗತಿಯ ಹಾದಿಯಲ್ಲಿದೆ. ‘ಅಮುಲ್’ ಹಾಗೂ ‘ನಂದಿನಿ’ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂದಿದ್ದರು.
ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಜಾಲತಾಣಗಳಲ್ಲಿ ಸಂದೇಶ ಹಾಕಿರುವ ಹಲವರು, ‘ಕರ್ನಾಟಕದ ಅಸ್ಮಿತೆಯಾಗಿರುವ ‘ನಂದಿನಿ’ ಬ್ರ್ಯಾಂಡ್ ಮೇಲೆ ಅಮಿತ್ ಶಾ ಕಣ್ಣು ಬಿದ್ದಿದೆ ಎಂದು ವ್ಯಾಖ್ಯಾನಿಸಿದ್ದಾರೆ.
‘ರಾಜ್ಯದಲ್ಲಿ ಜೀವಂತವಾಗಿರುವ ಸಹಕಾರ ವ್ಯವಸ್ಥೆಯ ಖಾಸಗೀಕರಣ ಹುನ್ನಾರದಿಂದಲೇ ಶಾ ಈ ಮಾತು ಹೇಳಿದ್ದಾರೆ. ಈಗಾಗಲೇ ಕರ್ನಾಟಕ ಮೂಲದ ಬ್ಯಾಂಕ್ಗಳನ್ನು ಇತರ ಬ್ಯಾಂಕ್ಗಳೊಂದಿಗೆ ವಿಲೀನ ಮಾಡಿದ್ದಾಗಿದೆ. ಈಗ ಕೆಎಂಎಫ್ ಅನ್ನೂ ಕಾರ್ಪೊರೇಟ್ ಕಂಪನಿಗೆ ನೀಡಲು ಷಡ್ಯಂತ್ರ ರೂಪಿಸಿದ್ದಾರೆ’ ಎಂದಿದ್ದಾರೆ.
‘ಅಮುಲ್ ಅನ್ನು ಇಲ್ಲಿಗೆ ತಂದರೆ ಅದ್ಯಾವ ಉದ್ದೇಶಗಳನ್ನು ಈಡೇರಿಸಿದಂತೆ ಆಗುತ್ತದೆ? ಕೆಎಂಎಫ್ನ ಸ್ವಾಯತ್ತತೆಗೆ ಧಕ್ಕೆಯಾಗಬಾರದು. ನಂದಿನಿ, ಕೆಎಂಎಫ್ ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮುಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತದೆ? ಬ್ಯಾಂಕ್ ಆಫ್ ಬರೋಡಾದ ಜೊತೆ ವಿಜಯ ಬ್ಯಾಂಕ್ ವಿಲೀನ. ಎಸ್ಬಿಐ ಜೊತೆ ನೂರು ವರ್ಷಗಳ ಇತಿಹಾಸ ಹೊಂದಿರುವ ಎಸ್ಬಿಎಂ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ಟಿನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತದೆ ಅಷ್ಟೆ’ ಎಂದು ಬರಹಗಾರ, ಕನ್ನಡಪರ ಚಿಂತಕ ವಸಂತ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
‘ನಂದಿನಿ ಎಂಬುದು ಕೇವಲ ಬ್ರಾಂಡ್ ಅಲ್ಲ. ಅದು ಕರ್ನಾಟಕದ ಹೆಗ್ಗುರುತು. ಹಾಲು ಉತ್ಪಾದಕರ ಹೆಮ್ಮೆಯ ಸಂಸ್ಥೆ. ಅಮುಲ್ ಅನ್ನು ನಂದಿನಿಯೊಂದಿಗೆ ವಿಲೀನಗೊಳಿಸಿದರೆ ಬೆಳವಣಿಗೆಯಾಗುವುದಿಲ್ಲ. ಆದರೆ, ನಮ್ಮದೇ ಹೆಗ್ಗುರುತಿಗೆ ತೀವ್ರ ಧಕ್ಕೆಯಾಗಲಿದೆ. ನಮಗೀ ಪ್ರಸ್ತಾವ ಬೇಡ. ನಂದಿನಿಯಿಂದ ದೂರವಿರಿ’ ಎಂದು ಗುರುಪ್ರಸಾದ್ ಎಂಬುವವರು ಹೇಳಿದ್ದಾರೆ.
‘ಕರ್ನಾಟಕ ಮೂಲದ ಬ್ಯಾಂಕುಗಳನ್ನು ನಾಶಪಡಿಸಿದ್ದಾಯ್ತು. ಈಗ ಕೆಎಂಎಫ್ ಮೇಲೆ ಕೇಂದ್ರ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಕರ್ನಾಟಕದ ರೈತರ ಪಾಲಿನ ಕಾಮಧೇನುವಂತಿರುವ ಕೆಎಂಎಫ್ ವಿಲೀನದ ಹೆಸರಲ್ಲಿ ಮುಳುಗಿಸುವ ಬಿಜೆಪಿ ಹುನ್ನಾರವನ್ನು ತಡೆಯಲು ಕನ್ನಡಿಗರು ಸಜ್ಜಾಗಬೇಕಿದೆ. ಕರ್ನಾಟಕದ ಅಸ್ಮಿತೆ, ಅರ್ಥಿಕತೆಗಳೆಲ್ಲವನ್ನೂ ಅಪೋಶನ ಪಡೆಯುವುದೇ ಬಿಜೆಪಿ ಅಜೆಂಡಾ’ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಅಮಿತ್ ಶಾ ಅವರೇ ನಿಮ್ಮ ಪ್ರಸ್ತಾವಕ್ಕೆ ಬದಲಾಗಿ ಹೀಗೆ ಮಾಡೋಣ. ಗುಜರಾತ್ನಲ್ಲಿ ನಂದಿನಿ ಬ್ರ್ಯಾಂಡ್ ಡೇರಿಗಳನ್ನು ಸ್ಥಾಪಿಸೋಣ. ನಿಮ್ಮ ಅಮುಲ್ ಅನ್ನು ನಂದಿನಿಯೊಂದಿಗೆ ವಿಲೀನಗೊಳಿಸಿ. ನಂದಿನಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್. ಅದರ ತಂಟೆಗೆ ಬರಬೇಡಿ ದಯವಿಟ್ಟು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಥೆ ನಮಗೆಲ್ಲ ಚೆನ್ನಾಗಿ ಗೊತ್ತಿದೆ’ ಎಂದು ‘ಚಂದನವನ’ ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
‘ಕರ್ನಾಟಕದ ರೈತರಿಗೆ ನಂದಿನಿ ಎನ್ನುವುದು ಮರಳುಗಾಡಿನಲ್ಲಿ ಓಯಸಿಸ್ ಇರುವಂತೆ. ಇದನ್ನು ಅಮುಲ್ ಜೊತೆಗೆ ಸೇರಿಸುವುದು ಬೇಡ. ಹಾಗೆ ಮಾಡಿದರೆ ಮೈಸೂರು ಮಹಾರಾಜರು ಕಟ್ಟಿ ಬೆಳೆಸಿದ ಮೈಸೂರು ರೈಲ್ವೆಯನ್ನು ಇಂಡಿಯನ್ ರೈಲ್ವೆಗೆ ಸೇರಿಸಿ ಈಗ ಸಣ್ಣಪುಟ್ಟದಕ್ಕೂ ಪರದಾಡುವಂತೆ ಆಗಿರುವ ಹಾಗಾಗುತ್ತದೆ’ ಎಂದು ಶಿಕ್ಷಕ ಸಿ.ಎಸ್.ಲಕ್ಷ್ಮೀಶ ಹೇಳಿದ್ದಾರೆ.
‘ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕಬೇಕು’
‘ನಮ್ಮ ಬ್ಯಾಂಕುಗಳನ್ನು ಕಸಿದು ಆರ್ಥಿಕತೆ ನಾಶಕ್ಕೆ ಯತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ, 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡಿಬಿಡುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು ₹ 20 ಸಾವಿರ ಕೋಟಿವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೇ ಹಾಲಿನಿಂದ. ಮಕ್ಕಳ ಶಿಕ್ಷಣ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣುಬಿದ್ದಿದೆ. ಅವರ ಕಣ್ಣು ಬಿದ್ದ ಕಡೆ, ಎಲ್ಲವೂ ಸರ್ವನಾಶವಾಗುತ್ತದೆ’ ಎಂದಿದ್ದಾರೆ.
ಜಾಲತಾಣದಲ್ಲಿ ಆಕ್ರೋಶ
ಅಮುಲ್ ‘ಟೇಸ್ಟ್ ಆಫ್ ಇಂಡಿಯಾ’ ಇರಬಹುದು. ಆದರೆ ‘ನಂದಿನಿ’ ನಮ್ಮ ಕರ್ನಾಟಕದ ಜೀವನಾಡಿ. ವಾರ್ಷಿಕ ₹ 1.50 ಲಕ್ಷ ಕೋಟಿ ವಹಿವಾಟು ಇರುವ ನಂದಿನಿಯನ್ನು ‘ಎಲ್ಲ ಒಂದು’ ಅನ್ನುವ ಹೆಸರಲ್ಲಿ ಕನ್ನಡ, ಕರ್ನಾಟಕದ ಗುರುತು ಮುಚ್ಚಿಹಾಕೋದು. ಈ ಸರ್ಕಾರ ಮುಂದುವರೆದರೆ ನಮ್ಮ ಬ್ರ್ಯಾಂಡ್ ಇತಿಹಾಸ ಪುಟ ಸೇರುವ ಎಲ್ಲ ಲಕ್ಷಣ ಕಾಣುತ್ತಿದೆ.
ಜಿ.ಸಿ. ಚಂದ್ರಶೇಖರ್, ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ
ದಯವಿಟ್ಟು ‘ನಂದಿನಿ’/ ಕೆಎಂಎಫ್ ತಂಟೆಗೆ ಬರಬೇಡಿ. ಕೆಎಂಎಫ್ ಪ್ರತಿ ಹಳ್ಳಿಯಲ್ಲೂ ಇರುವುದು ನಿಮಗೆ ತಿಳಿದಿಲ್ಲವೆ. ಮತ್ತಿನ್ನೇನು ತಿಳಿದಿದೆ ನಿಮಗೆ. ನಂದಿನಿ ಮತ್ತು ಅಮುಲ್ ಅನ್ನು ರಿಲಯನ್ಸ್ ಅದಾನಿಗೆ ಮಾರಾಟ ಮಾಡುವ ಹುನ್ನಾರವೇ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಕೋಟ್ಯಂತರ ರೈತ ಮಹಿಳೆಯರಿಗೆ ಕೆಎಂಎಫ್ ಬದುಕು ನೀಡಿದೆ. ಮನ್ಮುಲ್ ಎಂದರೆ ಮನೆಯ ಮುಂದಿನ ಮಾರುಕಟ್ಟೆ. ವಿಲೀನದ ಹೆಸರಿನಲ್ಲಿ ಏಕಸ್ವಾಮ್ಯ ಮಾರುಕಟ್ಟೆ ರೂಪುಗೊಳ್ಳುವ ಅಪಾಯವಿದೆ. ಅಮಿತ್ ಶಾ ಹೇಳಿಕೆಯಿಂದ ರೈತರಿಗೆ ಆತಂಕ ಆರಂಭವಾಗಿದೆ.
ನಂದಿನಿ ಜಯರಾಂ, ರೈತ ನಾಯಕಿ
ಅಮುಲ್ ಅನ್ನು ಸ್ಥಾಪಿಸಿದ ಡಾ. ಕುರಿಯನ್ ಅವರನ್ನು ಹೊರದಬ್ಬಿದ ಗುಜರಾತಿಗಳು ಈಗ ‘ನಂದಿನಿ’ಯನ್ನು ಮಾರಾಟ ಮಾಡಲು ಬಂದಿದ್ದಾರೆ.
ಲಾವಣ್ಯ ಬಲ್ಲಾಳ್, ಕಾಂಗ್ರೆಸ್ ಯುವ ನಾಯಕಿ
ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮುಳುಗಿಸಿ ಆಯ್ತು. ಈಗ ‘ನಂದಿನಿ’ಯನ್ನು ಮುಳುಗಿಸಲು ನೋಡುತ್ತಿದ್ದಾರೆ.
ರವಿಕುಮಾರ್, ಜಾಲತಾಣ ಬಳಕೆದಾರ
ಅಮುಲ್ ಇಲ್ಲದೆಯೂ ಕರ್ನಾಟಕ ಮತ್ತು ನಂದಿನಿ/ಕೆಎಂಎಫ್ ಉತ್ತಮವಾಗಿ ನಡೆಯಬಲ್ಲವು. ಅಮುಲ್ಗೆ ನಂದಿನಿ ಉತ್ತಮ ಪ್ರತಿಸ್ಪರ್ಧಿ ಆಗಬಹುದೇ ವಿನಾ ಅಂಗಸಂಸ್ಥೆಯಲ್ಲ.
ಶ್ರೀನಿವಾಸ ಕಕ್ಕಿಲ್ಲಾಯ,ವೈದ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.