ADVERTISEMENT

ಕೋವಿಡ್‌: 'ಒಬ್ಬ ಪಾಲಕರನ್ನು ಕಳೆದುಕೊಂಡ 162 ಮಕ್ಕಳಿಗೆ ನೆರವು ನೀಡಲು ಚರ್ಚೆ'

ಮಕ್ಕಳಿಗೆ ನೆರವಾಗಲು ಶೀಘ್ರದಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 11:47 IST
Last Updated 23 ಜೂನ್ 2021, 11:47 IST
ಕೋವಿಡ್‌ನಿಂದಾಗಿ ತಂದೆಯನ್ನು ಕಳೆದುಕೊಂಡ ಹುಡುಗಿಯೊಬ್ಬಳು ಗೋಡೆಯ ಮೇಲೆ 'ಐ ಮಿಸ್‌ ಯು ಪಾಪಾ' ಎಂದು ಬರೆಯುತ್ತಿರುವುದು
ಕೋವಿಡ್‌ನಿಂದಾಗಿ ತಂದೆಯನ್ನು ಕಳೆದುಕೊಂಡ ಹುಡುಗಿಯೊಬ್ಬಳು ಗೋಡೆಯ ಮೇಲೆ 'ಐ ಮಿಸ್‌ ಯು ಪಾಪಾ' ಎಂದು ಬರೆಯುತ್ತಿರುವುದು   

ಧಾರವಾಡ: ‘ಕೊರೊನಾ ಸೋಂಕಿನಿಂದ ಒಬ್ಬ ಪಾಲಕರನ್ನು ಕಳೆದುಕೊಂಡ 162 ಮಕ್ಕಳಿಗೆ ನೆರವಾಗುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನವನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಜಿಲ್ಲಾ ಪ್ರವಾಸ ಕೈಗೊಂಡ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಂಕಿನಿಂದಾಗಿ ಇಬ್ಬರು ಪಾಲಕರನ್ನು ಕಳೆದುಕೊಂಡ 52 ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಘೋಷಿಸಲಾಗಿದೆ. ಪ್ರತಿ ಮಗುವಿನ ಪಾಲನೆಗೆ ಪ್ರತಿ ತಿಂಗಳು ₹3500 ನೀಡುವುದು, ಉಚಿತ ಶಿಕ್ಷಣ, ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಉನ್ನತ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಅದರಂತೆಯೇ ಒಬ್ಬ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಚರ್ಚೆಗಳು ನಡೆಯುತ್ತಿವೆ’ ಎಂದರು.

‘ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ರಕ್ಷಣಾ ಘಟಕದ ಮೂಲಕ ಪ್ರತಿ ಮನೆಮನೆಗೆ ಭೇಟಿ ನೀಡಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಮಾಹಿತಿಯನ್ನು ಬಾಲ ಸ್ವರಾಜ್ ವೆಬ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ’ ಎಂದರು.

ADVERTISEMENT

‘ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡಲು ಮೊಟ್ಟೆ ಖರೀದಿಸಿದ ಅಲ್ಲಿನ ಶಿಕ್ಷಕರಿಗೆ ಹಣ ನೀಡುವಲ್ಲಿ ವಿಳಂಬವಾಗಿದೆ. ಮಾರಕಟ್ಟೆಯಲ್ಲಿನ ದರ ವ್ಯತ್ಯಾಸ ಕಂಡುಬಂದಿದ್ದರಿಂದ ಹಣಕಾಸು ಇಲಾಖೆ ಒಪ್ಪಿಗೆ ನೀಡಿಲ್ಲ. ಈ ಕುರಿತಂತೆ ಇನ್ನು ಒಂದು ತಿಂಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜೊಲ್ಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.