ಬೆಳಗಾವಿ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಅಧ್ಯಕ್ಷರಾಗಿ ಕಳೆದ ತಿಂಗಳಷ್ಟೇ ಆಯ್ಕೆಯಾಗಿದ್ದ ಮಹಾದೇವ ಪಾಟೀಲ (82) ಸೋಮವಾರ ಹೃದಯಾಘಾತದಿಂದ ನಿಧನರಾದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಿಕ್ಕಾಟದಿಂದಾಗಿ ಅಧ್ಯಕ್ಷರ ಚುನಾವಣೆ ರಾಜ್ಯದ ಗಮನ ಸೆಳೆದಿತ್ತು.
ತಾಲ್ಲೂಕಿನ ಉಚಗಾಂವ ಗ್ರಾಮದವರಾಗಿದ್ದ ಮಹಾದೇವ ಪಾಟೀಲ ಅವರು ಬೆಳಿಗ್ಗೆ ಬ್ಯಾಂಕ್ಗೆ ಆಗಮಿಸಿದ್ದರು. ಕೆಲಹೊತ್ತು ಸಿಬ್ಬಂದಿಗಳ ಜೊತೆ ಚರ್ಚಿಸಿದ ನಂತರ ಸಮೀಪದ ಫುಲಬಾಗ್ ಗಲ್ಲಿಯಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಮಧ್ಯಾಹ್ನ 1.30ರ ಹೊತ್ತಿಗೆ ಮಗಳ ಮನೆಯಲ್ಲಿಯೇ ಹೃದಯಾಘಾತಕ್ಕೀಡಾಗಿ, ಸಾವನ್ನಪ್ಪಿದರು.
ಮೃತರಿಗೆ ಪತ್ನಿ, ಆರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.
ಎರಡನೇ ಬಾರಿ ಆಯ್ಕೆ:
ಮಹಾದೇವ ಪಾಟೀಲ ಅವರು ಕಳೆದ ಅವಧಿಯಲ್ಲಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ಹಿಸಿದ್ದರು. ಈ ಅವಧಿಯಲ್ಲಿ ಪುನಃ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್ 8ರಂದು ನಡೆದ ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಣದ ಜೊತೆ ಗುರುತಿಸಿಕೊಂಡಿದ್ದರು. ಅವರ ನೆರವಿನಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.