ಹಾಸನ: ‘ಮಾಧ್ಯಮಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನ ರಾಜಾಹುಲಿ ಎಂದು ಬಿಂಬಿಸುತ್ತಿವೆ. ಆದರೆ, ಪ್ರಧಾನಿ ಮುಂದೆ ರಾಜಾ ಇಲಿ ಆಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಭೇಟಿಗೆ ತೆರಳಿದ ಯಡಿಯೂರಪ್ಪಗೆ ಅವಕಾಶ ನೀಡದೆ ವಾಪಸ್ ಕಳುಹಿಸಲಾಗಿದೆ. ಪ್ರಧಾನಿ ಕರ್ನಾಟಕ ಭೇಟಿಯಿಂದ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರು ನಿರೀಕ್ಷೆ ಹುಸಿಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಬಜೆಟ್ ಮಂಡಿಸಿದ ವೇಳೆ ರಾಮನಗರ, ಹಾಸನ, ಮಂಡ್ಯ ಬಜೆಟ್ ಎನ್ನುತ್ತಿದ್ದರು. ಆದರೆ, ಇಂದು ಸಿ.ಎಂ ಗೆ ರಾಮನಗರ ಮೇಲೆ ವಿಶೇಷ ಕಾಳಜಿ ಬಂದಿದೆಯೇ? ರಾಮನಗರಕ್ಕೆ ಹೊಸ ಹೆಸರು ನೀಡುವುದರಿಂದ ಏನೂ ಬದಲಾವಣೆ ಆಗುವುದಿಲ್ಲ. ಹೆಸರು ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಮಾಡುವುದರೊಳಗೆ ಈ ಸರ್ಕಾರ ಇರಲಿದೆಯೋ? ಇಲ್ಲವೋ ? ನೋಡೋಣ’ ಎಂದರು.
ಅಲ್ಲದೇ, ಬಿಜೆಪಿ ಪಕ್ಷದಲ್ಲಿಯೇ ಯಡಿಯೂರಪ್ಪರನ್ನ ಕೆಳಗಿಸಲು ಹೊರಟಿದ್ದಾರೋ? ಇಲ್ಲಾ ಸರ್ಕಾರವನ್ನೇ ಉರುಳಿಸುತ್ತಾರೋ ಗೊತ್ತಿಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.