ಹುಬ್ಬಳ್ಳಿ: ‘ಭಾರತೀಯ ಜನತಾ ಪಾರ್ಟಿಯ ವಿಚಾರಧಾರೆಗಳನ್ನು ಜನ ಒಪ್ಪುತ್ತಿರುವುದರಿಂದ ಕೆಲವರು ದೇಶದ ಮಹಾಪುರುಷರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದೊಂದು ಅಸಹಿಷ್ಣುತೆಯಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರತಿಯೊಂದಕ್ಕೂ ವಿವಾದ ಸೃಷ್ಟಿಸುವ ಯತ್ನ ನಡೆಯುತ್ತಿದೆ. ಅವೆಲ್ಲ ಚುನಾವಣೆಯ ಕಿಮಿಕ್ ಆಗಿದೆ’ ಎಂದು ಆರೋಪಿಸಿದರು.
‘ಶಾಲಾ ಪಠ್ಯ–ಪುಸ್ತಕ ಇನ್ನೂ ಹೊರಗೆ ಬಂದಿಲ್ಲ. ಅದಾಗಲೇ ಭಗತ್ ಸಿಂಗ್, ನಾರಾಯಣ ಗುರು ಅವರ ಪಠ್ಯ ಕೈ ಬಿಡಲಾಗಿದೆ ಎಂದು ಹೇಳುತ್ತಿದ್ದಾರೆ. ಮೊದಲು ಪುಸ್ತಕ ನೋಡಿ ಎಂದು ಪಠ್ಯಪುಸ್ತಕ ರಚನಾ ಸಮಿತಿ ಅವರಿಗೆ ಆಹ್ವಾನ ನೀಡಿದೆ. ಅದನ್ನು ನೋಡದೆ ವಿವಾದ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಏನೇ ಮಾಡಿದರೂ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ವಿಚಾರಗಳಿದ್ದರೆ ಸ್ವೀಕರಿಸುವ ಮನೋಭಾವ ಇರಬೇಕು. ತಾವು ಕೈ ಬಿಟ್ಟಿರುವ ಪಠ್ಯದ ವಿಷಯವನ್ನು ಸಹ ಸರ್ಕಾರದ ಮೇಲೆ ಹಾಕುತ್ತಿರುವುದು ದುರ್ದೈವ’ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಂಗಳೂರಿನ ಮಳಲಿ ಮಸಿದಿಯಲ್ಲಿ ದೇವಾಲಯ ಮಾದರಿ ಪತ್ತೆಯಾಗಿರುವ ಕುರಿತು ಪ್ರತಿಕ್ರಿಸಿದ ಸಚಿವ ಜೋಶಿ, ‘ಅಲ್ಲಿ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಯುವ ಪ್ರಯತ್ನ ನಡೆದಿದೆ. ಎಲ್ಲರೂ ಕೂಡಿ ಸಮಸ್ಯೆಗೆ ಪರಿಹಾರ ನೀಡಬೇಕು. ಹೊಸ ವಿವಾದ ಹುಟ್ಟುಹಾಕುವುದು ಬೇಡ’ ಎಂದು ವಿನಂತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.