ಬೆಳಗಾವಿ: ಹೈದರಾಬಾದ್ ಮಹಾನಗರಪಾಲಿಕೆಯಲ್ಲಿನ ಫಲಿತಾಂಶದ ಮೂಲಕ ಬಿಜೆಪಿಯ ವಿಶ್ವಾಸ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ರಾಷ್ಟ್ರೀಯ ವಿಚಾರದ ರಾಜಕಾರಣ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದ್ ಭಾಗ್ಯನಗರವಾಗುವ ಕಡೆಗೆ ಮೊದಲ ಹೆಜ್ಜೆ ಇಟ್ಟಿದೆ. ಪಕ್ಷಕ್ಕೆ ಹೊಸ ವಿಶ್ವಾಸ ಬಂದಿದೆ. ತೆಲಂಗಾಣದಲ್ಲಿ ಆಳ್ವಿಕೆ ಬರುವುದಕ್ಕೆ ಸೂಚನೆ ಇದಾಗಿದೆ. ಅಲ್ಲಿ ರಾಜಕಾರಣದಲ್ಲಿ ಪರಿವರ್ತನೆ ಆಗಲಿದೆ. ಕರ್ನಾಟಕದ ಜೊತೆಗೆ ದಕ್ಷಿಣದಲ್ಲಿ ಮತ್ತಷ್ಟು ಅವಕಾಶದ ವಾತಾವರಣ ನಿರ್ಮಾಣವಾಗಿದೆಎಂದರು.
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಬೇರೆ ಬೇರೆ ನಿಗಮ ಮಾಡಿದಾಗ, ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಎಂದು ಮಾಡಿದಾಗ ಪ್ರಶ್ನಿಸಲಿಲ್ಲವೇಕೆ? ಎಂದು ಕೇಳಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದಕ್ಕೆ ಆದ್ಯತೆ ಕೊಟ್ಟೇ ಕೊಡುತ್ತೇವೆ. ಹಾಗೆಂದು ಇಲ್ಲಿರುವ ಇತರ ಭಾಷೆಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಅಭಿಮಾನದ ಮೂಲಕ ಕನ್ನಡವನ್ನು ಉಳಿಸಿಕೊಳ್ಳುತ್ತೇವೆಯೇ ಹೊರತು ಬೇರೆ ಭಾಷೆ ದ್ವೇಷಿಸುವ ಮೂಲಕವಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.