ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಾಜಕೀಯ ನಾಯಕರು ಹಾಗೂ ಮಠಾಧೀಶರ ಪ್ರತಿಕ್ರಿಯೆಗಳು ಇಲ್ಲಿವೆ...
***
‘ಸ್ವಾಮೀಜಿಗಳಿಗೆ ರಾಜಕೀಯ ಶೋಭೆಯಲ್ಲ’
ರಾಜನೀತಿಯಲ್ಲಿ ಲೋಪ ಕಂಡುಬಂದರೆ ಹಾಗೂ ರಾಜಕಾರಣಿಗಳು ತಪ್ಪು ಮಾಡಿದರೆ, ಸ್ವಾಮೀಜಿಗಳಾದವರು ಬುದ್ಧಿ ಹೇಳಿ ಮಾರ್ಗದರ್ಶನ ಮಾಡಬೇಕೇ ವಿನಾ ರಾಜಕೀಯದೊಳಕ್ಕೆ ಪ್ರವೇಶ ಮಾಡಬಾರದು. ಆಡಳಿತ ಯಂತ್ರದ ಮೇಲೆ ಒತ್ತಡ ಹಾಕುವುದು ಅಥವಾ ವೈಯಕ್ತಿಕವಾಗಿ ರಾಜಕೀಯ ಮಾಡುವುದು ಮಠಾಧೀಶರಿಗೆ ಶೋಭೆಯಲ್ಲ.
ರಾಜಕೀಯ ಅನುಭವ, ವ್ಯಕ್ತಿತ್ವ, ಪಕ್ಷ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಜನಪ್ರತಿನಿಧಿಗಳಿಗೆ ಉತ್ತಮ ಸ್ಥಾನ ದೊರೆಯಬೇಕು. ಸ್ವಾಮೀಜಿಗಳು ಸಲಹೆ ಕೊಡಬಹುದೇ ಹೊರತು ಬೆದರಿಕೆ ಹಾಕಬಾರದು.
-ಸದಾಶಿವ ಸ್ವಾಮೀಜಿ,ಹುಕ್ಕೇರಿ ಮಠ, ಹಾವೇರಿ
***
‘ಜಾತಿ ರಾಜಕಾರಣದ ದುರ್ಗಂಧ ಬೇಡ’
ರಾಜಕೀಯದಲ್ಲಿ ಧರ್ಮ ಗುರು ಸ್ಥಾನದಲ್ಲಿ ಇರಬೇಕು. ರಾಷ್ಟ್ರೀಯ ಹಿತಕ್ಕೆ, ರಾಜ್ಯದ ಜನತೆಯ ಹಿತಕ್ಕೆ ಧಕ್ಕೆ ಬರುವ ಹಾಗೂ ಕೆಡಕು ಆಗುವಂಥ ಸಂದರ್ಭದಲ್ಲಿ ಆನೆಗೆ ಅಂಕುಶ ಹಾಕುವ ರೀತಿಯಲ್ಲಿ ಮಠಾಧೀಶರು ಇರಬೇಕು. ಜಾತಿ, ಮತ, ಪಂಥ, ರಾಜಕಾರಣದ ಲೇಪನ ಆಗಬಾರದು. ಜಾತಿ ರಾಜಕಾರಣ ದುರ್ಗಂಧ ಇದ್ದ ಹಾಗೆ.
ಸಂವಿಧಾನಾತ್ಮಕ ನಿರ್ಣಯಗಳು ಹಾಗೂ ಧಾರ್ಮಿಕ ನಿರ್ಣಯಗಳು ಯಾವಾಗಲೂ ಒಂದೇ ಆಗಿರುತ್ತವೆ. ಆದರೆ, ಧರ್ಮ ಹಾಗೂ ಜಾತಿ ರಾಜಕೀಯದಿಂದಲೇ ರಾಜಕಾರಣ ಹಾಳಾಗುತ್ತಿದೆ. ಕೊಲೆಗಡಕನಾದರೂ ನಮ್ಮ ಜಾತಿಯವನು ಹೋಗಲಿ ಬಿಡಿ ಎನ್ನುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದು ತಪ್ಪು. ಮಠಾಧೀಶರು ಜಾತಿ, ಮತ, ಪಂಥ ರಹಿತವಾಗಿ ಕೇವಲ ದೇಶದ ಸರ್ವಜನರ ಹಿತದೃಷ್ಟಿಯಿಂದ ಆಲೋಚಿಸಬೇಕು.
-ಅಕ್ಕ ಅನ್ನಪೂರ್ಣ,ಲಿಂಗಾಯತ ಮಹಾಮಠ,ಬೀದರ್
***
'ಮಠಗಳು ಸೀಮಿತವಾಗಿ ಸೇವೆ ಮಾಡಲಿ'
ರಾಜ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಅಮೋಘ ಹಾಗೂ ಅವಿಸ್ಮರಣೀಯ. ಇವತ್ತಿನ ಸನ್ನಿವೇಶದಲ್ಲೂ ಮಠಗಳು ರಾಜ್ಯದ ಜನತೆಯನ್ನು ಒಳ್ಳೆಯ ದಾರಿಗೆ ಒಯ್ಯಲು, ಅನಿಷ್ಠಗಳ ನಿರ್ಮೂಲನೆ ಮಾಡಲು, ಸುಂದರ ಸಮಾಜ ನಿರ್ಮಾಣ ಮಾಡಲು ಸೀಮಿತವಾಗಿ ಸೇವೆ ಮಾಡಬೇಕು.
-ಈಶ್ವರ ಖಂಡ್ರೆ,ಕೆಪಿಸಿಸಿ ಕಾರ್ಯಾಧ್ಯಕ್ಷ
***
'ಜಾತಿ ಹೆಸರಿನಲ್ಲಿ ಮಠಾಧೀಶರ ಹೋರಾಟ ಸರಿ ಅಲ್ಲ'
ಸ್ವಾಮೀಜಿಗಳು ಸಮಾಜಕ್ಕೆ ಧಾರ್ಮಿಕ, ನೈತಿಕ ಮೌಲ್ಯಗಳ ಕುರಿತು ಮಾರ್ಗದರ್ಶನ ಮಾಡಬೇಕು. ಸಮಾಜದಲ್ಲಿರುವ ಒಡಕುಗಳನ್ನು ಜಾತಿ ಹೆಸರಿನಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳಲ್ಲಿ ತೊಡಗಬಾರದು. ಯಾವುದೇ ಸ್ವಾಮೀಜಿ ಒಂದು ಜಾತಿ, ಸಮುದಾಯದ ಪರ ಇರಬಾರದು. ಹಿಂದೂ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು.
ವೀರಶೈವ– ಲಿಂಗಾಯತ ಮಠಾಧೀಶರು, ಸ್ವಾಮಿಗಳು ಜಾತಿ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಬಾರದು. ತಕ್ಷಣವೇ ಇಂತಹ ಹೋರಾಟ, ಪಾದಯಾತ್ರೆ ನಿಲ್ಲಿಸಬೇಕು. ತಮ್ಮ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಒಬ್ಬ ಸ್ವಾಮೀಜಿ ಹೇಳಿದ್ದಾರೆ. ತಮ್ಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮತ್ತೊಬ್ಬ ಸ್ವಾಮೀಜಿ ಒತ್ತಡ ಹೇರುತ್ತಿದ್ದಾರೆ. ಮಠಾಧೀಶರೇ ಜಾತಿ ಹೆಸರಿನಲ್ಲಿ ಹೋರಾಟ ಮಾಡುವುದು ಸರಿ ಕಾಣುವುದಿಲ್ಲ.
-ಸೊಗಡು ಶಿವಣ್ಣ, ಬಿಜೆಪಿ ಮುಖಂಡ
***
‘ಒಳ್ಳೆಯ ಬೆಳವಣಿಗೆಯಲ್ಲ’
ಮೊದಲಿನಿಂದಲೂ ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.ಈಗ ಇದು ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ.
ಈ ಹಿಂದೆಲ್ಲ ಸರ್ಕಾರ ಮಠಗಳಿಗೆ ಹಣ ಕೊಡುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಠಗಳಿಗೆ ಕೋಟಿಗಟ್ಟಲೆ ರೂಪಾಯಿ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ತಮಗೆ ಗೌರವ ಕೊಡುತ್ತಾರೆ ಎಂಬ ಕಾರಣಕ್ಕೆ ಕೆಲ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಬೇಡಿಕೆಗಳ ಪಟ್ಟಿಯನ್ನೇ ಇಡುತ್ತಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ತಮ್ಮ ಸಮುದಾಯದ ಶಾಸಕರ ರಾಜೀನಾಮೆ ಕೊಡಿಸುತ್ತೇವೆ ಎಂಬ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಹೀಗೆ ಮಾಡಬೇಡಿ ಎಂದು ನಾವು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮಠಾಧೀಶರನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಮಾದರಿಯಾಗಿ ಯಾವ ರೀತಿ ಬದುಕಬೇಕು ಎಂಬುದನ್ನು ಅವರೇ ಅರ್ಥಮಾಡಿಕೊಂಡರೆ ಒಳ್ಳೆಯದು.
-ಶಾಮನೂರು ಶಿವಶಂಕರಪ್ಪ,ರಾಷ್ಟ್ರೀಯ ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ
***
‘ಮಠಾಧೀಶರು ಬೆದರಿಕೆ ಒಡ್ಡುವುದು ಸಲ್ಲ’
ಕರ್ನಾಟಕದಲ್ಲಿ ಮಠಾಧೀಶರು ರಾಜಕೀಯ ವಿಚಾರಗಳೊಳಗೆ ಹಸ್ತಕ್ಷೇಪ ಮಾಡಲು ಆರಂಭಿಸಿ ಹಲವು ದಶಕಗಳೇ ಸಂದಿವೆ. ಇದೇನೂ ಹೊಸ ಬೆಳವಣಿಗೆ ಅಲ್ಲ. ಅಧಿಕಾರಸ್ಥರಿಗೆ ಹತ್ತಿರದಲ್ಲಿರಲು, ಮಠದ ಸಂಪತ್ತು ಹೆಚ್ಚಿಸಿಕೊಳ್ಳಲು ರಾಜಕಾರಣಿಗಳ ಜತೆ ನಂಟು ಇರಿಸಿಕೊಳ್ಳುವವರು ಹೆಚ್ಚು. ಯಾವುದೇ ಜಾತಿ ಅಥವಾ ಸಮುದಾಯದ ಮಠಾಧೀಶರು, ಎಲ್ಲ ಜನರ ಹಿತಕ್ಕೆ ಪೂರಕವಾಗಿ ಸರ್ಕಾರಕ್ಕೆ ಸಲಹೆ ನೀಡುವುದನ್ನು ಒಪ್ಪಬಹುದು. ಆದರೆ, ’ಈ ಸಮುದಾಯದ, ಇಷ್ಟು ಮಂದಿಯನ್ನು ಸಚಿವರನ್ನಾಗಿ ಮಾಡಬೇಕು. ಇಂತಹವರನ್ನೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ತಪ್ಪಿದರೆ ಸರ್ಕಾರ ಉರುಳಿಸುತ್ತೇವೆ‘ ಎಂದು ಮಾತನಾಡುವುದು ಧರ್ಮ ಮತ್ತು ಪ್ರಜಾಪ್ರಭುತ್ವ ಎರಡಕ್ಕೂ ಮಾಡುವ ಅವಮಾನ.
– ವೀರಭದ್ರ ಚನ್ನಮಲ್ಲ ಸ್ವಾಮೀಜಿ,ನಿಡುಮಾಮಿಡಿ ಮಾನವ ಧರ್ಮ ಪೀಠಾಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.