ADVERTISEMENT

ಎಡ್ಯುವರ್ಸ್ | ಒಂದೇ ಸೂರಿನಡಿ ‘ಶೈಕ್ಷಣಿಕ ಮಾಹಿತಿ ಕಣಜ’

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಶೈಕ್ಷಣಿಕ ಮೇಳ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
<div class="paragraphs"><p>ಬೆಂಗಳೂರಿನಲ್ಲಿ ‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ವಿವಿಧ ಕೋರ್ಸ್‌ಗಳ ಮಾಹಿತಿ ಪಡೆದರು</p></div>

ಬೆಂಗಳೂರಿನಲ್ಲಿ ‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ವಿವಿಧ ಕೋರ್ಸ್‌ಗಳ ಮಾಹಿತಿ ಪಡೆದರು

   

–ಪ್ರಜಾವಾಣಿ ಚಿತ್ರ.

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್‌, ಸಿಇಟಿ ಫಲಿತಾಂಶ ಪ್ರಕಟವಾದ ಮೇಲೆ ಉತ್ತಮ ಕಾಲೇಜು ಆಯ್ಕೆ ಹೇಗೆ? ಪ್ರವೇಶ ಶುಲ್ಕ, ಕೋರ್ಸ್‌ಗಳ ಆಯ್ಕೆ, ಭವಿಷ್ಯದಲ್ಲಿನ ಉದ್ಯೋಗಾವಕಾಶಗಳು, ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲ ಸೌಲಭ್ಯ, ಎಂಜಿನಿಯರಿಂಗ್–ಮೆಡಿಕಲ್‌ ಕೋರ್ಸ್‌ಗಳ ಜತೆಗೆ ಬೇರೆ ಯಾವ ಕೋರ್ಸ್‌ಗಳಿವೆ.. ಹೀಗೆ ವಿದ್ಯಾರ್ಥಿಗಳು, ಪೋಷಕರಲ್ಲಿದ್ದ ಅನುಮಾನಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಶನಿವಾರದಿಂದ ಆರಂಭವಾದ ‘ಶೈಕ್ಷಣಿಕ ಮೇಳ’ ಮಾಡಿತು.

ADVERTISEMENT

ಇಲ್ಲಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ನಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳು ತಮ್ಮಲ್ಲಿದ್ದ ಗೊಂದಲಗಳನ್ನು ಬಗೆಹರಿಸಿಕೊಂಡರು.

ಮೇಳದಲ್ಲಿ ಭಾಗವಹಿಸಿದ್ದ ಸುಮಾರು 60 ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ನರ್ಸಿಂಗ್, ಡಿಪ್ಲೊಮಾ, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌, ಡಿಜಿಟಲ್ ಮಾರ್ಕೆಟಿಂಗ್ ಎಂ.ಬಿ.ಎ, ಬಿ.ಎಸ್‌ಸಿ, ಬಿ.ಟೆಕ್‌, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಸಿಎ, ಫ್ಯಾಷನ್ ಡಿಸೈನ್..  ಹೀಗೆ ವಿವಿಧ ಕೋರ್ಸ್‌ಗಳು ಹಾಗೂ ಕಾಲೇಜುಗಳ ವಿಶೇಷತೆಗಳ ಬಗ್ಗೆ ಮಾಹಿತಿ ಒದಗಿಸಿದವು.

ಪ್ರತಿ ಮಳಿಗೆಯ ಬಳಿ ಬರುತ್ತಿದ್ದ ವಿದ್ಯಾರ್ಥಿಗಳು, ಕುತೂಹಲದಿಂದ ಮಾಹಿತಿ ಪಡೆದುಕೊಂಡಿದ್ದು ಕಾಣಿಸಿತು. ಸಿಬ್ಬಂದಿಯೂ ಅಷ್ಟೇ ಸರಳವಾಗಿ ಮಾಹಿತಿ ನೀಡುವ ಮೂಲಕ ಅನುಮಾನ ಪರಿಹರಿಸಿದರು. ಭಾನುವಾರ ಸಹ ಮೇಳ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಒದಗಿಸಲಿದೆ.

ನಟ ವಿಜಯರಾಘವೇಂದ್ರ ಮಾತನಾಡಿದರು.

ಜಾಲತಾಣಕ್ಕೆ ಮನಸುಗಳೇ ಮಾಯ: ವಿಜಯ ರಾಘವೇಂದ್ರ

ಮಿತಿ ಇಲ್ಲದ ಜಾಲತಾಣಗಳ ಜಗತ್ತು ಜನರ ಮನಸ್ಸುಗಳನ್ನೇ ಮಾಯ ಮಾಡುತ್ತಿದೆ. ಅಂತಹ ಮನಸ್ಸುಗಳನ್ನು ವಾಸ್ತವಕ್ಕೆ ಮರಳಿ ತಂದು ಭವಿಷ್ಯದ ಮಾರ್ಗದರ್ಶನ ತೋರುವ ಕೆಲಸವನ್ನು ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಮಾಡುತ್ತಿವೆ ಎಂದು ಚಿತ್ರ ನಟ ವಿಜಯ್‌ ರಾಘವೇಂದ್ರ ಹೇಳಿದರು.

ಎಡ್ಯುವರ್ಸ್‌’ಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು ಸ್ಪರ್ಧಾ ಪ್ರಪಂಚದಲ್ಲಿ ಶೈಕ್ಷಣಿಕ ವಿಷಯಗಳ ವಿಸ್ತಾರ ಹೆಚ್ಚುತ್ತಲೇ ಇದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಮುಂದೆ ಆಯ್ಕೆಯ ಸವಾಲುಗಳಿವೆ. ಸ್ಪಷ್ಟ ನಿರ್ಧಾರ ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಅರ್ಹತೆ ಮನೋಸ್ಥಿತಿಗೆ ಅನುಗುಣವಾಗಿ ಅವರನ್ನು ಸಜ್ಜುಗೊಳಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು. ಎಡ್ಯುವರ್ಸ್‌ ಅದಕ್ಕೆ ತಕ್ಕ ಮಾರ್ಗದರ್ಶನ ಮಾಡುತ್ತದೆ ಎಂದರು.

‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕಿ ಎಸ್‌. ರಶ್ಮಿ ಪ್ರಾಸ್ತಾವಿಕ ಮಾತನಾಡಿದರು. ದಿ ಪ್ರಿಂಟರ್ಸ್‌ ಮೈಸೂರು ಲಿಮಿಟೆಡ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಾಜೀವ್ ವೇಲೂರ್ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಿರಣ್‌ ಸುಂದರರಾಜನ್‌ ಆ್ಯಡ್‌ 6 ಅಡ್ವರ್ಟೈಸಿಂಗ್‌ ವ್ಯಸ್ಥಾಪಕ ನಿರ್ದೇಶಕಿ ಕೆ.ವಿಜಯಕಲಾ ಸುಧಾಕರ್ ‘ನ್ಯೂಸ್‌ಫಸ್ಟ್‌’ ವಾಹಿನಿಯ ರಕ್ಷಿತ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.