
ಪ್ರಲ್ಹಾದ ಜೋಶಿ
ಬೆಂಗಳೂರು: ದಲಿತ ಮುಖ್ಯಮಂತ್ರಿ ಮಾಡುವ ನೈಜ ಕಳಕಳಿ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
‘ಮುಖ್ಯಮಂತ್ರಿ ಕುರ್ಚಿ’ಗೆ ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ಕಾದಾಟ ನಡೆಸಿರುವ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಈಗ ಅದಕ್ಕೆ ‘ದಲಿತ ಸಿಎಂ’ ಎಂಬ ಹೊಸ ಆಯಾಮ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
‘ರಾಜ್ಯ ಕಾಂಗ್ರೆಸ್ಸಿಗರಿಗೆ ಹೇಳೋರೂ– ಕೇಳೋರು ಯಾರೂ ಇಲ್ಲದಂತಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಶಿಷ್ಯಂದಿರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಈಗಿನ ಮತ್ತು ಮುಂದಿನ ಬಜೆಟ್ ಮಂಡಿಸುತ್ತಾರೆ ಎನ್ನೋರು ಕೆಲವರು, ಇದೇ ಅವರ ಕೊನೆ ಬಜೆಟ್ ಅನ್ನೋರು ಮತ್ತೆ ಕೆಲವರು. ಇವರ ಜಂಜಾಟದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ’ ಎಂದು ದೂರಿದರು.
ನೀರಿನ ಕ್ಷಾಮ:
ರಾಜ್ಯದಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ತೀವ್ರವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಬವಣೆ ಹೇಳ ತೀರದು. ರಸ್ತೆಗಳೂ ಅಧೋಗತಿ ಸ್ಥಿತಿ ತಲುಪಿವೆ. ಆದರೆ, ಇವರು ಈ ಮೂಲಭೂತ ಸೌಲಭ್ಯದ ಕಡೆ ಗಮನಹರಿಸೋದು ಬಿಟ್ಟು ಕುರ್ಚಿ ಗುದ್ದಾಟದಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದರು.
ಶಾಸಕ ಚಂದ್ರು ಲಮಾಣಿ ಪ್ರಕರಣದ ತನಿಖೆ ಆಗಬೇಕು. ಸ್ವಾಮೀಜಿ ಸಂಭಾಷಣೆಯ ಆಡಿಯೊಗಳು ಹೊರಬಂದಿವೆ. ಬೇಕಂತಲೇ ಯಾರೋ ಬಲೆಗೆ ಬೀಳಿಸಿದ್ದಾರೆಯೆ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.