ADVERTISEMENT

ಆರೋಪವಿದ್ದ ಮಾತ್ರಕ್ಕೆ ಅಪರಾಧಿಯಲ್ಲ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 11:37 IST
Last Updated 13 ಫೆಬ್ರುವರಿ 2020, 11:37 IST
ಪ್ರಲ್ಹಾದ ಜೋಶಿ ಹಾಗೂ ಆನಂದ್‌ ಸಿಂಗ್‌
ಪ್ರಲ್ಹಾದ ಜೋಶಿ ಹಾಗೂ ಆನಂದ್‌ ಸಿಂಗ್‌    

ಹುಬ್ಬಳ್ಳಿ: ಸಚಿವ ಆನಂದ್‌ಸಿಂಗ್‌ ಮೇಲೆ ಅರಣ್ಯ ಒತ್ತುವರಿಯ ಆರೋಪವಿದ್ದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ. ಆರೋಪ ಸಾಬೀತಾಗಿಲ್ಲಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅರಣ್ಯ ಒತ್ತುವರಿ ಬಗ್ಗೆ ಆನಂದ್‌ಸಿಂಗ್‌ ಮೇಲೆ ಪ್ರಕರಣಗಳಿದ್ದೂ ಅವರಿಗೆ ಅರಣ್ಯ ಖಾತೆ ಕೊಡಲಾಗಿದೆಯಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ಮುಖ್ಯಮಂತ್ರಿಯವರು ತಮ್ಮ ವಿವೇಚನೆಯಿಂದ ಖಾತೆ ಹಂಚಿಕೆ ಮಾಡಿಕೊಂಡಿದ್ದಾರೆ. ಆನಂದ್‌ಸಿಂಗ್‌ ಚೆನ್ನಾಗಿ ತಮ್ಮ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಾರೆ’ ಎಂದರು.

ADVERTISEMENT

ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ ‘ದೆಹಲಿಯಲ್ಲಿ ನಮ್ಮ ಪಕ್ಷ ಸೋತರೂ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಇದು ತಾತ್ಕಾಲಿಕ ಹಿನ್ನಡೆಯಷ್ಟೇ. ಕಾಂಗ್ರೆಸ್‌ ಸಂಪೂರ್ಣವಾಗಿ ಶರಣಾಗಿದೆ. ಈಗಲೇ ಲೋಕಸಭಾ ಚುನಾವಣೆ ನಡೆದರೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಎಲ್ಲ ಕ್ಷೇತ್ರಗಳಲ್ಲಿ ಗೆದ್ದು ಬರುತ್ತಾರೆ. ಮುಂಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆಗಳಲ್ಲಿಯೂ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುವುದು’ ಎಂದರು.

ವೇಗದಿಂದ ಕಾರು ಚಾಲನೆ ಮಾಡಿ ಇಬ್ಬರ ಸಾವಿಗೆ ಸಚಿವ ಆರ್‌. ಅಶೋಕ ಪುತ್ರ ಕಾರಣರಾಗಿದ್ದಾರೆ ಎನ್ನುವ ಆರೋಪವಿದೆಯಲ್ಲ ಎನ್ನುವ ಪ್ರಶ್ನೆಗೆ ‘ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ’ ಎಂದರು. ಇದಕ್ಕೆ ಶೆಟ್ಟರ್‌ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.