ಬೆಂಗಳೂರು:ನಟ ಪ್ರಕಾಶ್ ರೈ ವಿರುದ್ಧ ಮೈಸೂರು–ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕೆ ಸಂಬಂಧಿಸಿದ ವಿವಾದ ಸುಖಾಂತ್ಯವಾಗಿದೆ.
2017ರಲ್ಲಿ ಪ್ರಕಟಿಸಿದ್ದ ಬರಹದ ಬಗ್ಗೆ ಪ್ರತಾಪ್ ಸಿಂಹ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರತಾಪ್ ಕ್ಷಮೆ ಕೋರಿರುವುದನ್ನು ಮನ್ನಿಸಿರುವುದಾಗಿ ಪ್ರಕಾಶ್ ರೈ ಅವರೂ ಟ್ವೀಟ್ ಮಾಡಿದ್ದಾರೆ.
‘ಪ್ರಿಯ ಪ್ರಕಾಶ್ ರೈ ಅವರೇ, 2017ರ ಅಕ್ಟೋಬರ್ 2 ಮತ್ತು 3ರಂದು ನಿಮ್ಮ ಹಾಗೂ ನಿಮ್ಮ ಕುಟುಂಬದವರ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದೆ. ಅದು ಮನನೋಯಿಸುವಂಥದ್ದು ಮತ್ತು ಅನಗತ್ಯವಾದದ್ದು ಎಂಬುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಆ ಫೇಸ್ಬುಕ್ ಮತ್ತು ಟ್ವಿಟರ್ ಪೋಸ್ಟ್ ಬಗ್ಗೆ ನಾನು ನಿಸ್ಸಂದಿಗ್ಧವಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, ‘ಧನ್ಯವಾದ ಪ್ರತಾಪ್ ಸಿಂಹ. ನಿಮ್ಮನ್ನು ಮನ್ನಿಸಿದ್ದೇನೆ. ನಮ್ಮ ಸಿದ್ಧಾಂತಗಳು ಭಿನ್ನವಾಗಿರಬಹುದು. ಆದರೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮತ್ತು ಕೆಟ್ಟ ನಿಂದನೆಗಳನ್ನು ಮಾಡಬಾರದು. ನಮ್ಮ ಕ್ಷೇತ್ರಗಳಲ್ಲಿ ನಾವು ಯಶಸ್ವಿ ವ್ಯಕ್ತಿಗಳಾಗಿದ್ದು, ಮಾದರಿಯಾಗಿರಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ನಿಮಗೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.